ಕನಕಪುರ: ಶಿಕ್ಷಕರು ಪ್ರಸ್ತುತ ಸಮಾಕ್ಕೆ ಅಗತ್ಯವಾದ ಶಿಕ್ಷಣವನ್ನು ಮಕ್ಕಳಿಗೆ ನೀಡುವಂತಾಗಬೇಕೆಂದು ಶಿಕ್ಷಣ ತಜ್ಞ ಶ್ಯಾಮಸುಂದರ್ ಶರ್ಮಾ ಹೇಳಿದರು.
ಪಟ್ಟಣದ ರೂರಲ್ ಕಾಲೇಜಿನಲ್ಲಿ 2012 ನೇ ಸಾಲಿನ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಕರು ಇತರರರಿಗೆ ಮಾದರಿಯಾಗಿರಬೇಕು. ಸದೃಢ ರಾಷ್ಟ್ರವನ್ನು ಕಟ್ಟುವಂತಹ ಮಕ್ಕಳನ್ನು ತಯಾರು ಮಾಡಬೇಕಿದೆ. ಇಲ್ಲವಾದಲ್ಲಿ ಸಮಾಜ ದುಸ್ಥಿತಿಗೆ ತಲುಪುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಆರ್ಇಎಸ್ ಸಂಸ್ಥೆಯ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಮಾತನಾಡಿ, ಶಿಕ್ಷಣಾರ್ಥಿಗಳು ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಬದುಕಿದಾಗ ಓದಿದ ಸಂಸ್ಥೆಗೆ ಹಾಗೂ ಪಾಠ ಹೇಳಿಕೊಟ್ಟ ಶಿಕ್ಷಕರಿಗೂ ಗೌರವ ದೊರೆಯುತ್ತದೆ ಎಂದರು.
ಉಪಾಧ್ಯಕ್ಷ ಕೆ.ಬಿ.ನಾಗರಾಜು, ಖಜಾಂಚಿ ಎಂ.ನಾಗರಾಜು, ಸದಸ್ಯರಾದ ತಿಮ್ಮಯ್ಯ, ನಾಗೇಗೌಡ, ಪ್ರಾಂಶುಪಾಲ ಎಚ್.ಎಸ್. ಹರೀಶ್ ಇತರರು ಹಾಜರಿದ್ದರು.