ಗ್ರಾಮಕ್ಕೆ ಹೊಂದಿಕೊಂಡಿರುವ ಈ ಕಟ್ಟೆಗೆ ಶಿಲುಬೆ ಕಟ್ಟೆ ಎಂದು ಕರೆಯಲಾಗುತ್ತಿದ್ದು, ಕಳೆದ ರಾತ್ರಿ ದುಷ್ಕರ್ಮಿಗಳು ಕಟ್ಟಿಗೆಯ ಶಿಲುಬೆ ಧ್ವಂಸಗೊಳಿಸಿದ್ದಾರೆ. ಇದಲ್ಲದೇ ಸುತ್ತಲೂ ಇದ್ದ ಕಬ್ಬಿಣದ ಶಿಲುಬೆಗಳನ್ನೂ ಧ್ವಂಸಗೊಳಿಸಲಾಗಿದೆ. ಪ್ರತಿವರ್ಷ ಈಸ್ಟರ್ ಸಂದರ್ಭದಲ್ಲಿ ಇಲ್ಲಿ ಕ್ರಿಶ್ಚಿಯನ್ನರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದೀಗ ಕ್ರಿಸ್ಮಸ್ ಮುಗಿದು ಈಸ್ಟರ್ ಬರಲು ತಿಂಗಳು ಬಾಕಿ ಇರುವಾಗಲೇ ಇಂತಹ ದುಷ್ಕೃತ್ಯ ನಡೆದಿದೆ. ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರ ಲಕ್ಕಂ, ಗ್ರಾಮೀಣ ಠಾಣೆ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಭೇಟಿ ನೀಡಿ ಪರಿಶೀಲಿಸಿದರು.
ಮನವಿ: ತಾಲ್ಲೂಕಿನ ಠಾಣಾಗುಂದಿಯಲ್ಲಿ ನಡೆದ ಶಿಲುಬೆಕಟ್ಟೆ ಧ್ವಂಸ ಪ್ರಕರಣವನ್ನು ಖಂಡಿಸಿ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಪಾಲ್ ಮಧುಕರ್ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದವರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಸ್ಟರ್ ಬರಲು ತಿಂಗಳು ಬಾಕಿ ಇರುವಾಗಲೇ ಇಂತಹ ದುಷ್ಕೃತ್ಯ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಬಾಲಮಿತ್ರ ಅಬೆಲ್, ಇಮಾನುವೆಲ್ ಬೆಳ್ಳಿ, ವೈ.ಎಸ್. ಸಾಮುವೆಲ್, ವಿಜಯರತ್ನ, ಡೇವಿಡ್ ಯೇಸುಮಿತ್ರ ಠಾಣಾಗುಂದಿ, ಡೇವಿಡ್ ಠಾಣಾಗುಂದಿ, ಶಾಂತರಾಜ ಹೊಸಮನಿ, ಕ್ರೈಸ್ತ ಹಿತ ರಕ್ಷಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅನಿಲಕುಮಾರ ಮಾಸನ, ನಿಂಗಪ್ಪ ಮ್ಯಾಗೇರಿ ಇನ್ನಿತರರು ಪಾಲ್ಗೊಂಡಿದ್ದರು.