ದಾವಣಗೆರೆ: ಶಿವದಾಸಿಮಯ್ಯ ಜಯಂತ್ಯುತ್ಸವ ಮತ್ತು ಬಸವ ಜಯಂತಿ ಶತಮಾನೋತ್ಸವ ಆಚರಣೆ ಪ್ರಯುಕ್ತ ಅಖಿಲ ಕರ್ನಾಟಕ ಲಿಂಗಾಯತ ಶಿವಸಿಂಪಿ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಶರಣ ಶಿವದಾಸಿಮಯ್ಯ, ಬಸವೇಶ್ವರ ಅವರ ಅಲಂಕೃತ ಭಾವಚಿತ್ರ ಮೆರವಣಿಗೆ ಶನಿವಾರ ನಗರದಲ್ಲಿ ನಡೆಯಿತು.
ನಗರದ ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಸಾಗಿ ವಿನೋಬ ನಗರದ ಮುರುಘರಾಜೇಂದ್ರ ಪ್ರೌಢಶಾಲೆ ಆವರಣದ ವೇದಿಕೆಗೆ ಆಗಮಿಸಿತು.
ಮೆರವಣಿಗೆಯಲ್ಲಿ ನಂದಿಕೋಲು ಕುಣಿತ, ಕೀಲುಕುದುರೆ ಕುಣಿತ, ಜಿಂಜಿಮೇಳದೊಂದಿಗೆ ವೇದಿಕೆಗೆ ವಿಜೃಂಭಣೆಯಿಂದ ಕರೆತರಲಾಯಿತು. ಬೆಳಿಗ್ಗೆ ಬೈಕ್ರ್ಯಾಲಿ ನಡೆಯಿತು.
ಮೆರವಣಿಗೆಯ ನೇತೃತ್ವವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ವಹಿಸಿದ್ದರು. ಶಿವಸಿಂಪಿ ಸಮಾಜದ ನೂರಾರು ಜನರು ಭಾಗವಹಿಸಿದ್ದರು.