ದೇವನಹಳ್ಳಿ: ಡಾ.ಜಿ.ಮಾದೇಗೌಡರ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಸಾವಯುವ ಕೃಷಿಕ ಪ್ರಶಸ್ತಿಗೆ ದೇವನಹಳ್ಳಿಯ ಪ್ರಗತಿಪರ ಹಾಗೂ ಸಾವಯುವ ಕೃಷಿಕ ಶಿವನಾಪುರ ರಮೇಶ್ ಆಯ್ಕೆಯಾಗಿದ್ದಾರೆ.
ಇದೇ 10ರಂದು ಮಂಡ್ಯ ರೈತ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಬಿ.ಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಕಂದಾಯ ಸಚಿವ ವಿ.ಶ್ರಿನಿವಾಸ್ ಪ್ರಸಾದ್ ವಹಿಸಲಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಮುಖ್ಯ ಅಥಿತಿಯಾಗಿ ಭಾಗವಹಿಸುವರು. ಭಾರತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಮಾದೇಗೌಡ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಸಮಾಜ ಸೇವೆಯ ಪ್ರಶಸ್ತಿಗೆ ಡಾ.ಬಿ. ಅಂಬಣ್ಣ ಭಾಜನರಾಗಿದ್ದಾರೆ. ಈ ಬಾರಿಯದ್ದು 13ನೇ ವರ್ಷದ ಪ್ರಶಸ್ತಿಯಾಗಿದೆ.
ಪರಿಚಯ: ಶಿವನಾಪುರ ರಮೇಶ್ 10ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿದ್ದಾರೆ. 1981ರಲ್ಲಿ ತಮ್ಮ ಪಾಲಿಗೆ ಬಂದ ಎರಡೂವರೆ ಎಕರೆ ಖುಷ್ಕಿ ಜಮೀನನ್ನು ್ತ ಶ್ರದ್ಧೆಯಿಂದ ಸಮೃದ್ಧ ತೋಟವನ್ನಾಗಿಸಿದ್ದಾರೆ. ಮೊದಲು ಸೊಪ್ಪು, ತರಕಾರಿ ಬೆಳೆದು ನಂತರ ಬಾಳೆ, ಏಲಕ್ಕಿ, ಆಲೂಗಡ್ಡೆ, ದ್ರಾಕ್ಷಿ, ಹಿಪ್ಪುನೇರಳೆಯಂತಹ ಆರ್ಥಿಕ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ. 1996ರಲ್ಲಿ ಚುರ್ಕಾಡಿ ರಾಮಚಂದ್ರ ನಾಯರ್ ಮತ್ತು ನಾರಾಯಣ ರೆಡ್ಡಿ ಅವರಂತಹ ಸಾವಯವ ಕೃಷಿಕರ ಜೊತೆ ಕೈಜೋಡಿಸಿ ಸಾವಯುವ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದರು.
ಮೊದಲ ಬಾರಿಗೆ ದೇವನಹಳ್ಳಿ ಚಕ್ಕೋತ ಹಣ್ಣಿನ ಪರಂಪರೆಯ ಅರಿವು ಮೂಡಿಸಿಕೊಂಡು ಅದರ ಉಳಿವಿಗೆ ಪ್ರಯತ್ನ ಆರಂಭಿಸಿದರು. ರಾಷ್ಟ್ರೀಯ ತೋಟಗಾರಿಕಾ ಮಿಷನ್, ರಾಜ್ಯ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಚಕ್ಕೋತ ಸಸಿ ಅಭಿವೃದ್ಧಿ ಕೇಂದ್ರ ಆರಂಭಗೊಳ್ಳಲು ಕಾರಣಕರ್ತರಾದರು. ಸದ್ಯ ತೇಜ ನರ್ಸರಿ ಆರಂಭಿಸಿ ಅದರ ಜೋಪಾನ ಮಾಡುತ್ತಿದ್ದಾರೆ. ಇಲ್ಲಿ ದೇಶದ ಪ್ರತಿಯೊಂದು ರಾಜ್ಯದ ಪ್ರಾದೇಶಿಕ ಹಾಗೂ ವೈವಿಧ್ಯಮಯ ತಳಿಗಳ ಸಸಿಗಳನ್ನು ಕಸಿ ಮಾಡಲಾಗುತ್ತಿದೆ.
ಹೂ ಗಿಡಗಳನ್ನು ರಸಗೊಬ್ಬರ ಮುಕ್ತಗೊಳಿಸಿ ಈ ಮಣ್ಣಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಹೆಚ್ಚು ನಿಗಾ ವಹಿಸಿ ಬೆಳೆಸಲಾಗಿದೆ. ಇವರ ನರ್ಸರಿಯಲ್ಲಿ ಸದ್ಯ 508 ವಿವಿಧ ತಳಿಯ ಗಿಡಗಳಿವೆ. ದೇಶ ವಿದೇಶಗಳಿಂದ ಇಲ್ಲಿಗೆ ಆಗಮಿಸುವ ಆಸಕ್ತರು, ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಬಂದು ಮಾಹಿತಿ ಪಡೆದು ಕೊಂಡು ಹೋಗುತ್ತಾರೆ ಎಂಬುದೇ ಈ ನರ್ಸರಿಯ ವಿಶೇಷ.
ರಮೇಶ್ ಅವರಿಗೆ 2004 ರಲ್ಲಿ ಎಂ.ಎಚ್.ಮರೀಗೌಡ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿ, 2005ರಲ್ಲಿ ಅತ್ಯುತ್ತಮ ಜಿಲ್ಲಾ ಕೃಷಿಕ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.