ಬೆಂಗಳೂರು: ರಾಜ್ಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ ವಿಧಾನ ಮಂಡಲದ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.
ಗೃಹ ಕಚೇರಿ `ಕೃಷ್ಣಾ~ದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅಧಿವೇಶನದ ದಿನಾಂಕವನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು. ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷಗಳು ಕ್ಷುಲ್ಲಕ ವಿಚಾರಕ್ಕೆ ಧರಣಿ ನಡೆಸುವುದನ್ನು ಬಿಟ್ಟು, ಜನಪರ ಚರ್ಚೆಗೆ ಸಹಕಾರ ನೀಡಲಿ~ ಎಂದು ಆಗ್ರಹಿಸಿದರು.
ರಾಜ್ಯದ 84 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಬರ ಪರಿಹಾರ ಕಾರ್ಯದಲ್ಲಿ ಎಲ್ಲಾದರೂ ಲೋಪವಾಗಿದ್ದರೆ ವಿಪಕ್ಷಗಳು ಎತ್ತಿ ತೋರಿಸಲಿ. ಆದರೆ ಪುರಾವೆಗಳಿಲ್ಲದೆ ಆರೋಪ ಮಾಡುವುದು ಬೇಡ ಎಂದರು.
`ಕೃಷ್ಣಾ~ದಲ್ಲಿ ನಡೆಯುವ `ಜನತಾ ದರ್ಶನ~ ಕಾರ್ಯಕ್ರಮಕ್ಕೆ ಬರುವವರಲ್ಲಿ ನಿರುದ್ಯೋಗಿಗಳು ಹಾಗೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ನಿರ್ದಿಷ್ಟ ಕಾರಣ ಗೊತ್ತಾಗುತ್ತಿಲ್ಲ ಎಂದರು.