ಕೃಷ್ಣರಾಜಪುರ: ಬಿ.ನಾರಾಯಣಪುರ ಗ್ರಾಮದ ಕೆರೆಯ ಸಂಪೂರ್ಣ ಹೂಳು ತೆಗೆಸಿ, ಅದರ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಅಭಿವೃದ್ಧಿಪಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎನ್.ಎಸ್.ನಂದೀಶರೆಡ್ಡಿ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಬಿ.ನಾರಾಯಣಪುರ ಗ್ರಾಮದ ಶ್ರೀರಾಮ ದೇವಸ್ಥಾನದ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಡಾವಣೆಗಳ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಿಬಿಎಂಪಿ 2.75 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಕಿ.ಮೀ ಉದ್ದದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಸರ್ಕಾರ ವಾರ್ಡ್ ವ್ಯಾಪ್ತಿಯ 752 ಮಂದಿ ಪರಿಶಿಷ್ಟ ಅರ್ಹ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದರು.
ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ್, ಸಹಾಯಕ ಎಂಜಿನಿಯರ್ ಕೃಷ್ಣಾರೆಡ್ಡಿ, ಬಿಬಿಎಂಪಿ ಸದಸ್ಯರಾದ ಆರ್.ಮಂಜುಳಾದೇವಿ, ಸಿದ್ಧಲಿಂಗಯ್ಯ, ಸುಕುಮಾರ್, ಎನ್.ವೀರಣ್ಣ, ಮುಖಂಡ ಟಿ.ಕೆ.ತಾಯಪ್ಪ, ಪಿಳ್ಳಪ್ಪ, ಲೋಕೇಶ್, ಲಕ್ಷ್ಮಣ, ಕೇಶವಮೂರ್ತಿ, ಗೌರಮ್ಮ ಇದ್ದರು.