ಯಲಹಂಕ: ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದ ಪತಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಬಡಾವಣೆಯಲ್ಲಿ ಸೋಮವಾರ ನಡೆದಿದೆ.
ಪತ್ನಿ ದಾಕ್ಷಾಯಿಣಿ (23) ಕುತ್ತಿಗೆಗೆ ಚಾಕುವಿನಿಂದ ಇರಿದು, ಹತ್ಯೆ ಮಾಡಿದ ನಂತರ ಪತಿ ಮಗ್ಗದ ಕೆಲಸಗಾರ ರವಿಕುಮಾರ್ (34) ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೊದಲ ಪತ್ನಿ ತೊರೆದು ಹೋದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ತಿಪಟೂರಿನ ಹಳೇಪಾಳ್ಯದ ನಿವಾಸಿ ದಾಕ್ಷಾ ಯಿಣಿ ಅವರನ್ನು ಎರಡನೇ ವಿವಾಹವಾಗಿ ಅಲ್ಲಿಯೇ ಇಬ್ಬರೂ ಮಗ್ಗದ ಕೆಲಸ ಮಾಡಿಕೊಂಡು ನೆಲೆಸಿದ್ದರು. ದಂಪತಿಗೆ ಮೂರು ವರ್ಷದ ದಿಲೀಪ್ಕುಮಾರ್ ಎಂಬ ಗಂಡು ಮಗುವಿದೆ.
ಕಳೆದ 15 ದಿನಗಳ ಹಿಂದೆ ಗೌರಿ ಹಬ್ಬಕ್ಕೆಂದು ಅಗ್ರಹಾರ ಬಡಾವಣೆಯಲ್ಲಿರುವ ತನ್ನ ತಂದೆ ಶ್ರೀರಂಗಪ್ಪ ಅವರ ಮನೆಗೆ ಪತ್ನಿ ಹಾಗೂ ಮಗನೊಂದಿಗೆ ರವಿಕುಮಾರ್ ಆಗಮಿಸಿದ್ದರು. ಶ್ರೀರಂಗಪ್ಪ, ಅಗ್ರಹಾರ ಬಡಾವಣೆಯಲ್ಲಿ ಮಗ್ಗದ ಕೆಲಸ ಮಾಡುತ್ತಿದ್ದು, ತಾಯಿ ರತ್ನಮ್ಮ ಮಾರುತಿ ನಗರದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತ್ದ್ದ್ದ್ದಿದಾರೆ. ಇವರ ಇಬ್ಬರು ಮಕ್ಕಳಲ್ಲಿ ಮೊದಲನೆಯ ಮಗನೆ ರವಿಕುಮಾರ್.
ಸೊಸೆ ನಮ್ಮೆಲ್ಲರೊಂದಿಗೆ ಅನ್ಯೋನ್ಯವಾಗಿದ್ದರು. ಆದರೆ ನನ್ನ ಮಗ ಯಾವಾಗಲೂ ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದ. ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ, ಆಗಾಗ ಆಕೆಯೊಂದಿಗೆ ಜಗಳವಾಡುತಿದ್ದ ಎಂದು ಅತ್ತೆ ದೂರಿದರು.
ಈಶಾನ್ಯ ವಿಭಾಗದ ಡಿಸಿಪಿ ಡಾ.ಜಿ.ರಮೇಶ್, ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ ಕೆ.ಎಚ್.ಜಗದೀಶ್, ಇನ್ಸ್ಪೆಕ್ಟರ್ ನಂಜುಂಡೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.