ಮಹದೇವಪುರ: ಕ್ಷೇತ್ರದ ಓಫಾರಂ ಬಳಿ ಇತ್ತೀಚೆಗೆ ವರ್ತೂರಿನ ಶ್ರೀ ಯೋಗ ಕೇಂದ್ರದ ವತಿಯಿಂದ ವಿದೇಶಿ ಪ್ರಜೆಗಳಿಗಾಗಿ ಉಚಿತ ಯೋಗ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಗುರು ಲಕ್ಷ್ಮಣ ಹುಣಸಾಳ ಅವರು ಶಿಬಿರಾರ್ಥಿಗಳಿಗೆ ವಿವಿಧ ಆಸನಗಳ ತರಬೇತಿ ನೀಡಿ ಮಹತ್ವವನ್ನು ವಿವರಿಸಿದರು.
‘ಯೋಗ ಕಲಿಕೆಯಿಂದ ಸರ್ವ ರೋಗಗಳಿಂದ ಮುಕ್ತಿ ಹೊಂದಬಹುದು. ಹಾಗಾಗಿಯೇ ಪ್ರಾಚೀನ ಕಾಲದಲ್ಲಿ ಅನೇಕ ಮಹಾಪುರುಷರು ಹಾಗೂ ಯೋಗಿಗಳು ಯೋಗಾಭ್ಯಾಸವನ್ನು ಮಾಡುತ್ತಿದ್ದರು’ ಎಂದು ಅವರು ತಿಳಿಸಿದರು.
ಶಿಬಿರದಲ್ಲಿ ಅಮೆರಿಕ, ನೆದರ್ಲೆಂಡ್, ಲಂಡನ್ ದೇಶದ ಯೋಗಾಸಕ್ತ ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಯೋಗ ಗುರು ಲಕ್ಷ್ಮಣ ಹುಣಸಾಳ ಅವರನ್ನು ಸನ್ಮಾನಿಸಲಾಯಿತು.
ವಿದೇಶಿ ಯೋಗಪಟುಗಳಾದ ಮ್ಯಾಕ್, ಸಿಗ್ರೀಡ್ ಜಂಗ್ ಮತ್ತು ಮಾರ್ಕ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಯೋಗಾಸಕ್ತರು ಉಪಸ್ಥಿತರಿದ್ದರು.