ಹೊಸದುರ್ಗ: ಸಂಕಷ್ಟದಲ್ಲಿರುವವರ ಸೇವೆ ಪ್ರತಿಯೊಬ್ಬರ ಕರ್ತವ್ಯ ಎಂದು ತಹಶೀಲ್ದಾರ್ ಎಂ.ಪಿ. ಮಾರುತಿ ಹೇಳಿದರು.
ಇಲ್ಲಿನ ಸಾಯಿಬಾಬಾ ಮಂದಿರದಲ್ಲಿ ಈಚೆಗೆ ಏರ್ಪಡಿಸಿದ್ದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಷ್ಟದಲ್ಲಿರುವ ಜನರ ಸೇವೆಗೆಂದೇ ಸ್ಥಾಪಿಸಲ್ಪಟ್ಟ ರೆಡ್ಕ್ರಾಸ್ ಸಂಸ್ಥೆ ಪ್ರಕೃತಿ ವಿಕೋಪ ಸೇರಿದಂತೆ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಗೆ ಹತ್ತಿರವಾಗಿ ದುಡಿಯುತ್ತಿದೆ. ಹೊಸದುರ್ಗದಲ್ಲಿ ನೂತನವಾಗಿ ಶಾಖೆ ಆರಂಭಿಸಿರುವ ಸಂಸ್ಥೆ ಉತ್ತಮ ಕೆಲಸಗಳನ್ನು ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಗೌರವ ಕೋಶಾಧ್ಯಕ್ಷೆ ಮಧುರಾ ಅಶೋಕ್ಕುಮಾರ್ ನೂತನ ಶಾಖೆ ಉದ್ಘಾಟಿಸಿದರು. ಕಾರ್ಯದರ್ಶಿ ಡಾ.ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ವತಿಯಿಂದ 10 ಬಡ ಕುಟುಂಬಗಳಿಗೆ ದೈನಂದಿನ ಬದುಕಿಗೆ ಬೇಕಾದ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸಲಾಯಿತು.
ಪುರಸಭೆ ಅಧ್ಯಕ್ಷ ಎಚ್.ಬಿ. ಮಂಜುನಾಥ್, ಶಿರಡಿ ಸಾಯಿಬಾಬಾ ಟ್ರಸ್ಟ್ ಅಧ್ಯಕ್ಷ ಹಂಜಿ ಶಿವಸ್ವಾಮಿ, ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಗುಪ್ತ, ಸ್ಥಳೀಯ ಶಾಖೆ ಉಪಾಧ್ಯಕ್ಷ ಲವಕುಮಾರ್, ಡಿ.ಟಿ. ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.