ಆಗಸ್ಟ್ 15 ನಂತರ ಮುಂಗಾರು ಅಧಿವೇಶನ
ನವದೆಹಲಿ (ಪಿಟಿಐ): ಸಂಸತ್ತಿನ ಮುಂಗಾರು ಅಧಿವೇಶನ ಆಗಸ್ಟ್ 15ರ ನಂತರ ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಇಲ್ಲಿಯವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲವಾದರೂ ಅಧಿವೇಶನ ನಡೆಸಲು ಯಾವುದೇ ರೀತಿಯ ಆತುರವಿಲ್ಲ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಅಧಿವೇಶನ ಪ್ರಾರಂಭವಾಗುವ ಸಾಧ್ಯತೆ ಕೂಡ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಮುಂಗಾರು ಅಧಿವೇಶನ ಜುಲೈ ತಿಂಗಳ ಮೂರನೇ ವಾರದಲ್ಲಿ ಪ್ರಾರಂಭವಾಗುತ್ತದೆ.
ರೈಲು ಪ್ರಯಾಣದಲ್ಲೂ ಪಿಜ್ಜಾ ಲಭ್ಯ
ನವದೆಹಲಿ (ಪಿಟಿಐ): ರೈಲು ಪ್ರಯಾಣಕ್ಕೂ ಮೊದಲೇ ಪಿಜ್ಜಾ ಅಥವಾ ಪಾಸ್ತಾಗೆ ಆರ್ಡರ್ ಮಾಡಿದ್ದರೆ, ನಿಮ್ಮ ಪ್ರಯಾಣದ ವೇಳೆಗೆ ನಿಮ್ಮ ಸೀಟಿನ ಬಳಿ ಪಿಜ್ಜಾ ಲಭ್ಯವಿರುತ್ತದೆ. ಪ್ರಯಾಣಿಕರನ್ನು ಸಂತಸಪಡಿಸಲು ದೆಹಲಿ-ಜಮ್ಮು ಹಾಗೂ ದೆಹಲಿ-ಅಮೃತಸರದ ಆಯ್ದ ಕೆಲವು ರೈಲುಗಳಲ್ಲಿ ಅಂತರಜಾಲದ ಮುಖಾಂತರ ಆಹಾರವನ್ನು ಆರ್ಡರ್ ಮಾಡುವ ಪ್ರಾಯೋಗಿಕ ಯೋಜನೆಯೊಂದನ್ನು ರೈಲ್ವೆ ಸಚಿವಾಲಯವು ಕೈಗೆತ್ತಿಕೊಂಡಿದೆ.
ಆಹಾರ ಪೂರೈಕೆಯೂ ಪ್ರಯಾಣದರದಲ್ಲಿ ಸೇರಿರುವುದರಿಂದ ರಾಜಧಾನಿ ಹಾಗೂ ಶತಾಬ್ದಿ ರೈಲುಗಳಲ್ಲಿ ಈ ಸೇವೆ ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೃತಿಕ್ ರೋಷನ್ಗೆ ಮಿದುಳು ಶಸ್ತ್ರಚಿಕಿತ್ಸೆ
ಮುಂಬೈ (ಪಿಟಿಐ): ಬಾಲಿವುಡ್ ನಟ ಹೃತಿಕ್ ರೋಷನ್ ಮಿದುಳಿಗೆ ಸಂಬಂಧಿಸಿದ ಕಾಯಿಲೆಯಿಂದ (ಸಬ್ಡ್ಯುರಲ್ ಹೆಮಟೊಮಾ) ಬಳಲುತ್ತಿದ್ದು, ಭಾನುವಾರ ಮಿದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
`ಇಲ್ಲಿನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅರ್ಧ ಗಂಟೆ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಹೃತಿಕ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 2-3 ದಿನಗಳಲ್ಲಿ ಮನೆಗೆ ತೆರಳಲಿದ್ದಾರೆ' ಎಂದು ಅವರ ತಂದೆ ರಾಕೇಶ್ ರೋಷನ್ ಹೇಳಿದ್ದಾರೆ. ಇದಕ್ಕೂ ಮೊದಲು ರೋಷನ್ ಫೇಸ್ಬುಕ್ನಲ್ಲಿ ತಾವು ಶಸ್ತ್ರಚಿಕಿತ್ಸೆಗೆ ಒಳಪಡುವ ಬಗ್ಗೆ ಹೇಳಿಕೊಂಡಿದ್ದರು.
ಸಲ್ಮಾನ್ ವಿರುದ್ಧ ಖಾಸಗಿ ದೂರು
ಮುಂಬೈ (ಪಿಟಿಐ): ಅಪಘಾತವೆಸಗಿ ಪರಾರಿಯಾದ ಪ್ರಕರಣದ ನ್ಯಾಯಾಲಯ ಪ್ರಕ್ರಿಯೆಯ ವಿವರಗಳನ್ನು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸುವ ಮೂಲಕ ನ್ಯಾಯಾಲಯ ನಿಂದನೆ ಮಾಡಿದ್ದಾರೆ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.
ಕೊಲೆ ಮಾಡುವ ಉದ್ದೇಶವಿಲ್ಲದ ಹತ್ಯೆ ಕಲಂನಡಿ ಸಲ್ಮಾನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ಆದೇಶ ನೀಡಿದ್ದೂ ಸೇರಿದಂತೆ ಪ್ರಕರಣದ ವಿವರಗಳನ್ನು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸುವ ಮೂಲಕ ಸಲ್ಮಾನ್ ಖಾನ್ ಅವರು ನ್ಯಾಯಾಲಯ ನಿಂದನೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹೇಮಂತ್ ಪಾಟೀಲ್ ದೂರು ನೀಡಿದ್ದಾರೆ.
ರಜೆಗೆ ಬೀಚ್ ಸೂಕ್ತ: ಭಾರತೀಯರ ಇಚ್ಛೆ
ನವದೆಹಲಿ (ಪಿಟಿಐ): ಭಾರತೀಯರು ರಜಾ ದಿನಗಳನ್ನು ಬೀಚ್ಗಳಲ್ಲಿ ಕಳೆಯಲು ಇಚ್ಛಿಸುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಆನ್ಲೈನ್ ಪ್ರವಾಸ ಏಜೆನ್ಸಿಯಾಗಿರುವ ಎಕ್ಸ್ಪೀಡಿಯಾ.ಕಾಮ್ ನಡೆಸಿರುವ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗಗೊಂಡಿದೆ.
ಮುಂದಿನ ವರ್ಷ ಭಾರತೀಯ ಪ್ರವಾಸಿಗಳಲ್ಲಿ ಶೇ 95ರಷ್ಟು ಜನರು ಬೀಚ್ಗಳಲ್ಲಿ ರಜಾ ದಿನಗಳ ಮಜಾ ಸವಿಯಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯನ್ನಿದ್ದಾರೆ. ಅಲ್ಲಿನ ಶೇ 92ಷ್ಟು ಜನರು ಮುಂದಿನ ವರ್ಷ ರಜಾದಿನಗಳಲ್ಲಿ ಬೀಚ್ಗಳಿಗೆ ತೆರಳುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಏಪ್ರಿಲ್ 19ರಿಂದ ಮೇ 15ರ ಅವಧಿಯಲ್ಲಿ ಏಷ್ಯಾ, ಉತ್ತರ ಅಮೆರಿಕ, ಯೂರೋಪ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಗಾಗಿ 8,606 ವಯಸ್ಕರನ್ನು ಸಂದರ್ಶಿಸಲಾಗಿದ್ದು, ವಿವರಗಳನ್ನು ಭಾನುವಾರ ಪ್ರಕಟಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.