ಪದ್ಮಶ್ರೀ ವಾಪಸ್ಗೆ ಸೂಚನೆ
ಹೈದರಾಬಾದ್: ದೆನಿಕೈನಾ ರೆಡಿ ತೆಲುಗು ಚಿತ್ರದ ಆರಂಭ ಫಲಕದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಪ್ಪಾಗಿ ಪ್ರದರ್ಶಿಸಿರುವುದರಿಂದ ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ಮಾಡುವಂತೆ ಆಂಧ್ರಪ್ರದೇಶ ಹೈಕೋರ್ಟ್, ಟಾಲಿವುಡ್ ನಟರಾದ ಮೋಹನ್ಬಾಬು ಮತ್ತು ಬ್ರಹ್ಮಾನಂದನ್ ಅವರಿಗೆ ಆದೇಶಿಸಿದೆ.
ಪ್ರಶಸ್ತಿಯನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಪ್ರಶಸ್ತಿಯನ್ನು ಕೇಂದಕ್ಕೆ ವಾಪಸ್ ಮಾಡಿದರೆ ಅರ್ಜಿಗೆ ಸಂಬಂಧಿಸಿದ ಅಂತಿಮ ತೀರ್ಪು ನೀಡುವಾಗ ಮೃದು ಧೋರಣೆ ತಾಳಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಸುಡಾನ್: ನೌಕರರು ವಾಪಸ್
ನವದೆಹಲಿ (ಪಿಟಿಐ): ಸುಡಾನ್ನಲ್ಲಿ ಗಲಭೆ ಉಲ್ಬಣಗೊಂಡಿರುವುದರಿಂದ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗವು (ಒಎನ್ಜಿಸಿ) ದಕ್ಷಿಣ ಸುಡಾನ್ನಲ್ಲಿ ತೈಲ ತೆಗೆಯುವ ಕಾರ್ಯವನ್ನು ಸ್ಥಗಿತಗೊಳಿಸಿ ಅಲ್ಲಿರುವ ನೌಕರರನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡಿದೆ.
ನ್ಯಾಯಾಂಗ ಬಂಧನ ವಿಸ್ತರಣೆ
ಪಣಜಿ (ಪಿಟಿಐ): ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಆಪಾದನೆ ಎದುರಿಸುತ್ತಿರುವ ತೆಹಲ್ಕಾ ಪತ್ರಿಕೆಯ ಸ್ಥಾಪಕ ಸಂಪಾದಕ ತರುಣ್ ತೇಜ್ಪಾಲ್ ನ್ಯಾಯಾಂಗ ಬಂಧನವನ್ನು ಇಲ್ಲಿಯ ನ್ಯಾಯಾಲಯ ಮತ್ತೆ 12 ದಿನಗಳ ಕಾಲ ವಿಸ್ತರಿಸಿದೆ.
ಬಾಲಕಿ ಮೇಲೆ ಅತ್ಯಾಚಾರ
ಕೋಲ್ಕತ್ತ (ಪಿಟಿಐ): ಟ್ಯಾಕ್ಸಿಯೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ಪಾರ್ಕ್ ಸ್ಟ್ರೀಟ್ ಪ್ರದೇಶದಲ್ಲಿ ಸೋಮವಾರ ನಡೆದಿದೆ.