ಮುಳಬಾಗಲು: ಸಂಗೀತದಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದು ಸುಗಮ ಸಂಗೀತ ಸಂಯೋಜಕ ಶಂಕರ್ ಶ್ಯಾನುಭೋಗ್ ಅಭಿಪ್ರಾಯ ಪಟ್ಟರು.
ಪಟ್ಟಣದ ವೀರಭದ್ರನಗರದಲ್ಲಿ ಭಾನುವಾರ ಆರಂಭಗೊಂಡ ಪುರಂದರದಾಸರ ಆರಾಧನೋತ್ಸವದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಜ್ಞಾನಕ್ಕೆ ಮಿತಿ ಇಲ್ಲ. ಆದರೆ ಈ ಕ್ಷೇತ್ರ ತನ್ನದೇ ಆದ ದೌರ್ಬಲ್ಯಗಳಿಂದ ನರಳುತ್ತಿದೆ. ಸಂಗೀತ ಸಾಧನೆ ಮಾಡಿದ ಹಲವರು ಅಹಂಕಾರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. ಕನ್ನಡದಲ್ಲಿ ದೇವರ ನಾಮ ರಚಿಸಿ, ಸಂಸ್ಕೃತದಲ್ಲಿದ್ದ ತತ್ವಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ನೆರವಾದರು ಎಂದು ಅಭಿಪ್ರಾಯಪಟ್ಟರು.
ಸಂತ ಭದ್ರಗಿರಿ ಸವೋತ್ತಮ ದಾಸರು ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ವಸಂತ ಮಾಧವಿ, ಮೂರ್ತಿ, ಶ್ರೀನಿವಾಸರಾಜು, ಅರುಣಾಚಲರೆಡ್ಡಿ, ಭೀಮರಾವ್ ಗಾಯಕವಾಡ್, ಕಷ್ಣ ಭಜನೆ ಮಂಡಳಿಯ ರಾಘವೇಂದ್ರ ನಾಯಕ್, ಚಂದ್ರಮೌಳಿ ಮುಂತಾದವರು ಭಾಗವಹಿಸಿದ್ದರು.
ಎಂ.ಎ.ಜಯರಾಮರಾವ್ ನಿರೂಪಿಸಿದರು. ಎನ್.ರಾಜಾರಾವ್ ಸ್ವಾಗತಿಸಿದರು.