ದೊಡ್ಡಬಳ್ಳಾಪುರ: `ಜಾಗತೀಕರಣದ ಪ್ರಭಾವದಿಂದ ಮನುಷ್ಯ ಸಂಬಂಧಗಳು ದೂರವಾಗಿರುತ್ತಿರುವುದು ವಿಷಾದನೀಯ ಸಂಗತಿ~ ಎಂದು ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೇಜರ್ ಎಸ್.ಮಹಾಬಲೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ ರಾಮಯ್ಯನಪಾಳ್ಯ ಗ್ರಾಮದಲ್ಲಿ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಪ್ರಾರಂಭವಾದ ವಿಶೇಷ ಸೇವಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
`ಸೇವೆ ಮಾಡಲು ಯಾರ ಒತ್ತಡವು ಇರುವುದಿಲ್ಲ. ಉದಾತ್ತವಾದ ಸೇವಾ ಮನೋಭಾವದಿಂದ ಬದುಕು ಸಾರ್ಥಕವಾಗುತ್ತದೆ. ಮನುಷ್ಯ ಹೃದಯವಂತಿಕೆಯಲ್ಲಿ ಸಿರಿವಂತನಾಗಿರಬೇಕು. ತನ್ನ ಸುತ್ತಲಿನ ಸಮುದಾಯದ ಜೊತೆಯಲ್ಲಿ ಸ್ಪಂದಿಸಿ ಬದುಕುವುದನ್ನು ಮೊದಲು ಕಲಿಯಬೇಕು. ವಿದ್ಯಾಭ್ಯಾಸದ ಜೊತೆ ಜೊತೆಯಲ್ಲೇ ನಾಯಕತ್ವದ ಗುಣವನ್ನು ರೂಢಿಸಿಕೊಳ್ಳಬೇಕು. ಶಿಸ್ತು ಮತ್ತು ಸತತ ಅಭ್ಯಾಸದಿಂದ ಯಶಸ್ಸು ಸಾಧಿಸಲು ಸಾಧ್ಯ~ ಎಂದರು.
ಕೊಂಗಾಡಿಯಪ್ಪ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಶಂಕರಯ್ಯ ಮಾತನಾಡಿ, `ಕಾಯಕವೇ ಗ್ರಾಮೀಣ ಸಂಸ್ಕೃತಿ ಪ್ರಧಾನ ಆಶಯವಾಗಿದೆ. ಗ್ರಾಮೀಣ ಬದುಕನ್ನು ಅರ್ಥ ಮಾಡಿಕೊಳ್ಳದೇ ದೇಶದ ಅಭಿವೃದ್ಧಿಯನ್ನು ರೂಪಿಸಲು ಸಾಧ್ಯವಿಲ್ಲ. ಗ್ರಾಮಗಳು ಸಮಗ್ರವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಭಾರತದ ಅಭಿವೃದ್ದಿ ಸಾಧ್ಯ~ ಎಂದರು.
ಕಾರ್ಯಕ್ರಮದಲ್ಲಿ ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಬಿ.ಎನ್.ತಿಮ್ಮಣ್ಣ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎನ್.ಸತ್ಯನಾರಾಯಣ್, ಪ್ರಾಧ್ಯಾಪಕ ಎಂ.ಜಿ.ಅಮರನಾಥ್, ರಾಮಯ್ಯನಪಾಳ್ಯ ಗ್ರಾಮದ ಮುಖಂಡರಾದ ರಾಜಣ್ಣ, ಚಿಕ್ಕಆಂಜಿನಪ್ಪ, ಚನ್ನಬಸಪ್ಪ, ಬಸವರಾಜು ಮುಂತಾದವರು ಭಾಗವಹಿಸಿದ್ದರು.