ವಿಜಾಪುರ: ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಅಡ್ಡಪಲ್ಲಕ್ಕಿ ಮಹೋತ್ಸವ ಮಂಗಳವಾರ ಇಲ್ಲಿ ವಿಜೃಂಭಣೆಯಿಂದ ಜರುಗಿತು.
ಇಲ್ಲಿಯ ಉಕ್ಕಲಿ ರಸ್ತೆಯಲ್ಲಿರುವ ವಿಶ್ವಶಾಂತಿ ಪೀಠದಲ್ಲಿ ಜಗದಾರಾದ್ಯ ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಜಾತ್ರಾ ಮಹೋತ್ಸವದ ಅಂಗವಾಗಿ ಈ ಅಡ್ಡಪಲ್ಲಕ್ಕಿ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರ ನೇತೃತ್ವದಲ್ಲಿ ಪೂರ್ಣಕುಂಭ ಮೇಳದೊಂದಿಗೆ ನಡೆದ ಈ ಮಹೋತ್ಸವದಲ್ಲಿ ವಿಜಾಪುರ ಮತ್ತು ಜಾಲಹಳ್ಳಿ ಮಹಾಸಂಸ್ಥಾನ ಬೃಹನ್ಮಠದ ಜಯಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯರು, ಸಿಂದಗಿ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹಾಗೂ ವಿವಿಧ ಮಠಾಧೀಶರು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಈ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಸಹಸ್ರಾರು ಸುಮಂಗಲೆಯರು ಪೂರ್ಣಕುಂಭಗಳನ್ನು ಹೊತ್ತು ಭಕ್ತಿ ಮೆರೆದರು. ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತ, ಆಗಾಗ ಹೆಜ್ಜೆ ಹಾಕುತ್ತ ಉತ್ಸವಕ್ಕೆ ಕಳೆ ಕಟ್ಟಿದರು.
ಜಾನಪದ ತಂಡಗಳ ಕಲಾ ವೈಭವ, ಕುದುರೆ ಸಾರೋಟಿನ ಆಕರ್ಷಣೆ, ಹಲಗೆ-ಡೊಳ್ಳಿನ ಮೇಳಗಳು ಮೆರಗು ಹೆಚ್ಚಿಸಿದ್ದವು.
~ಧರ್ಮದಿಂದಲೇ ಬೆಳಕು. ಎಲ್ಲರೂ ಸದ್ಗುಣ, ಪರೋಪಕಾರವನ್ನು ಮೈಗೂಡಿಸಿಕೊಂಡು ಧರ್ಮವಂತರಾಗಿ ಬಾಳಬೇಕು. ಅಂದಾಗ ಸುಖೀ ಸಮಾಜ ನಿರ್ಮಾಣ ಸಾಧ್ಯ~ ಎಂದು ಜಗದ್ಗುರುಗಳು ಆಶೀರ್ವಚನ ನೀಡಿದರು.
ಸಂಜೆ ಮಠದಲ್ಲಿ ಮಹಾರಥೋತ್ಸವ, ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಬಿಡುಗಡೆ, ಶಿವಯೋಗ ಸಂಗೋಷ್ಠಿ ನಡೆದವು.