ಭದ್ರಾವತಿ: ‘ಒಳ್ಳೆಯ ವಿಚಾರಗಳ ಬಗ್ಗೆ ತಿಳಿವಳಿಕೆ ಇದ್ದಾಗ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ’ ಎಂದು ಹಿರಿಯ ವಿಭಾಗ ನ್ಯಾಯಾಧೀಶ ಮಹಮದ್ ಮುಜೀರುಲ್ಲಾ ಹೇಳಿದರು.ಇಲ್ಲಿನ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಶನಿವಾರ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂವಿಧಾನಿಕ ವ್ಯವಸ್ಥೆ ಕುರಿತಂತೆ ಸ್ವಲ್ಪ ಮಟ್ಟಿನ ಜ್ಞಾನವನ್ನು ಪ್ರತಿಯೊಬ್ಬರು ಅರಿಯಬೇಕು. ಶಾಸಕಾಂಗ ಹಾಗೂ ಕಾರ್ಯಾಂಗ ವ್ಯವಸ್ಥೆಯ ಕಾನೂನುಗಳ ಅನುಷ್ಠಾನವನ್ನು ನ್ಯಾಯಾಂಗವು ನಡೆಸಿಕೊಂಡು ಬಂದಿದೆ. ಇದರ ಕುರಿತು ಎಲ್ಲರೂ ಅರಿತಾಗ ಮಾತ್ರ ಸತ್ಪ್ರಜೆಗಳಾಗಲು ಸಾಧ್ಯ ಎಂದರು.
ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯೂ ಇದರಿಂದ ವಂಚಿತವಾಗದೇ ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಅರಿವು ಕಾರ್ಯಾಗಾರ ನಡೆಸಿದೆ. ಇದರ ಲಾಭವನ್ನು ಪಡೆಯುವುದು ಎಲ್ಲರ ಕರ್ತವ್ಯ ಎಂದು ಕರೆ ನೀಡಿದರು.ನ್ಯಾಯಾಧೀಶ ಕೆ.ಎಂ. ಪುಟ್ಟಸ್ವಾಮಿ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಆರಂಭವಾಗುವ ಕಾಯ್ದೆ, ಕಾನೂನುಗಳು ಆತನ ಸಾವಿನ ನಂತರ ಸಹ ಸಾಗುತ್ತದೆ. ಅಂದರೆ ಪ್ರತಿ ವ್ಯಕ್ತಿಯ ಬದುಕಿನಲ್ಲಿ ಕಾನೂನು ಅಡಗಿದೆ ಎಂದು ವಿವರಣೆ ನೀಡಿದರು.
ವಕೀಲರಾದ ಪ್ರಭ ಹಾಗೂ ಉದಯ್ಕುಮಾರ್ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.ವೇದಿಕೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ್, ಅನಿಲ್ಕುಮಾರ್, ತರುಣಭಾರತಿ ವಿದ್ಯಾಕೇಂದ್ರದ ವಿಶ್ವಸ್ಥ ಎಸ್.ಎನ್.ಸುಭಾಷ್, ಮುಖ್ಯೋಪಾಧ್ಯಾಯರಾದ ಶಶಿರೇಖಾ ಉಪಸ್ಥಿತರಿದ್ದರು.