ಜೋಹಾನ್ಸ್ಬರ್ಗ್ (ಪಿಟಿಐ): ‘ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯ ಕಾರಣ ಉತ್ತಮ ಯೋಜನೆ ರೂಪಿಸಿ ಭಾರತ ತಂಡವನ್ನು ಸುಲಭವಾಗಿ ಮಣಿಸಲು ಸಾಧ್ಯವಾಯಿತು’ ಎಂದು ದಕ್ಷಿಣ ಆಫ್ರಿಕಾ ತಂಡದ ಕೋಚ್ ರಸೆಲ್ ಡೊಮಿಂಗೋ ಅಭಿಪ್ರಾಯಪಟ್ಟಿದ್ದಾರೆ.
‘2010–11ರಲ್ಲಿ ಭಾರತ ತಂಡ ದ.ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಸಚಿನ್ ಮೂರು ಟೆಸ್ಟ್ ಪಂದ್ಯಗಳಲ್ಲಿ ಎರಡು ಶತಕ ಗಳಿಸುವ ಮೂಲಕ ಮಿಂಚಿದ್ದರು. ಜೊತೆಗೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಸಹ ಆಟಗಾರರಿಗೆ ಕೆಲ ಉಪಯುಕ್ತ ಮಾರ್ಗದರ್ಶನವನ್ನು ನೀಡಿ ಹುರಿದುಂಬಿಸುತ್ತಿದ್ದರು. ಈ ಸರಣಿಯಲ್ಲಿ ಅವರು ಇಲ್ಲದಿರುವುದು ನಮಗೆ ವರವಾಗಿ ಪರಿಣಮಿಸಿತು’ ಎಂದು ಹೇಳಿದ್ದಾರೆ.
‘ವೇಗದ ಬೌಲಿಂಗ್ ನಮ್ಮ ಶಕ್ತಿ. ದ.ಆಫ್ರಿಕಾದ ಪಿಚ್ಗಳಲ್ಲಿ ಭಾರತದ ಆಟಗಾರರು ವೇಗದ ಬೌಲಿಂಗ್ ಎದುರು ಪರದಾಡುತ್ತಾರೆ. ಇದು ಇತಿಹಾಸದಿಂದ ಸಾಬೀತಾಗಿದೆ. ಎದುರಾಳಿಗಳ ಈ ದೌರ್ಬಲ್ಯವನ್ನು ಅರಿತುಕೊಂಡೇ ನಾವು ಏಕದಿನ ಪಂದ್ಯಗಳಲ್ಲಿ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿದ್ದೆವು’ ಎಂದಿದ್ದಾರೆ.
‘ಭಾರತದಂತಹ ತಂಡದ ವಿರುದ್ಧ ಅದರಲ್ಲೂ ಇಲ್ಲಿನ ಪರಿಸ್ಥಿತಿಯಲ್ಲಿ ನಾಲ್ವರು ವೇಗಿಗಳನ್ನು ಕಣಕ್ಕಿಳಿಸುವುದು ಬಹಳ ಉಪಯುಕ್ತ. ಏಳು ಮಂದಿ ಬ್ಯಾಟ್ಸ್ಮನ್ಗಳ ತಂತ್ರ ಕೂಡಾ ಫಲಕಂಡಿದೆ ಹಾಗಾಗಿ ಈ ತಂತ್ರವನ್ನೇ ಮುಂದುವರೆಸುತ್ತೇವೆ’ ಎಂದು ತಿಳಿಸಿದ್ದಾರೆ.