ಬೆಂಗಳೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಅಗೌರವ ಉಂಟುಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ಕ್ಷಮೆ ಯಾಚಿಸಿದ್ದಾರೆ.
ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಉದ್ದೇಶಪೂರ್ವಕವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಪರಮೇಶ್ವರ್ ಅವರು ಗುರುವಾರ ಕೊರಟಗೆರೆಯಿಂದ ತುಮಕೂರಿನವರೆಗೆ ಪಾದಯಾತ್ರೆ ನಡೆಸಿದ್ದರು. ಈ ಸಂದರ್ಭದಲ್ಲಿ ಉದಾಸಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, `ನಾಲಾಯಕ್ ಸಚಿವ~, `ಮೂರ್ಖ ಮಂತ್ರಿ~ ಎಂದು ಜರೆದಿದ್ದರು. ಪರಮೇಶ್ವರ್ ಹೇಳಿಕೆಗೆ ಶುಕ್ರವಾರ ಉದಾಸಿ ತಿರುಗೇಟು ನೀಡಿದ್ದರು.
ಶನಿವಾರ ಉದಾಸಿ ಅವರಿಗೆ ಪತ್ರ ಬರೆದಿರುವ ಪರಮೇಶ್ವರ್, `ಪಾದಯಾತ್ರೆಯ ಸಂದರ್ಭದಲ್ಲಿ ರಸ್ತೆಗಳ ದುಃಸ್ಥಿತಿಯನ್ನು ಕಂಡಾಗ ನೋವಾಯಿತು. ಆಗ ಸಚಿವರ ವಿರುದ್ಧ ಬೇಸರಗೊಂಡು ಒಂದೆರಡು ಮಾತುಗಳನ್ನು ಆಡಿದ್ದೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ~ ಎಂದು ತಿಳಿಸಿದ್ದಾರೆ.