ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಜೈಸ್ವಾಲ್ ವಿರುದ್ಧ ದೂರು

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಾನ್ಪುರ (ಪಿಟಿಐ): ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಬುಧವಾರ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

`ವರ್ಷಗಳು ಉರುಳಿದಂತೆ ಮಹಿಳೆಯರು ಆಕರ್ಷಣೆ ಕಳೆದುಕೊಳ್ಳುತ್ತಾರೆ~ ಎಂದು ಸಚಿವರು ಭಾನುವಾರ ರಾತ್ರಿ ಕವಿ ಸಮ್ಮೇಳನದಲ್ಲಿ ನೀಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
 

ಅರ್ಜಿ ಸಲ್ಲಿಸಿರುವ ಅನಿತಾ ದುವಾ ಅವರಿಂದ ಇದೇ 8ರಂದು ಹೇಳಿಕೆ ದಾಖಲಿಸಿಕೊಳ್ಳುವಂತೆಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ವಿ.ಕೆ.ಪಾಂಡೆ ಆದೇಶ ನೀಡಿದ್ದಾರೆ.

`ಸಚಿವರು ತಮ್ಮ ಸ್ಥಾನದ ಘನತೆಗೆ ತಕ್ಕುದಲ್ಲದ ಹೇಳಿಕೆ ನೀಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ~ ಎಂದು ದುವಾ ಅರ್ಜಿಯಲ್ಲಿ ದೂರಿದ್ದಾರೆ.

ತಮ್ಮ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು ನಂತರದಲ್ಲಿ ಕ್ಷಮಾಪಣೆ ಕೇಳಿದ್ದರು. `ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಒಂದು ವೇಳೆ ನನ್ನ ಮಾತಿನಿಂದ ಮಹಿಳೆಯರ ಭಾವನೆಗೆ ಧಕ್ಕೆಯಾದರೆ ಕ್ಷಮೆ ಕೇಳುತ್ತೇನೆ~ ಎಂದು ಹೇಳಿದ್ದರು.

ಜೈಸ್ವಾಲ್ ಹೇಳಿದ್ದೇನು...?
ಸಚಿವರು ಕವಿ ಸಮ್ಮೇಳನದಲ್ಲಿ ಮಾತನಾಡುತ್ತ್ದ್ದಿದಾಗ ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿದ ಸುದ್ದಿ ಬಂತು. ಆಗ ಅವರು, `ಹಳೆಯ ಗೆಲುವಿನಂತೆಯೇ ಪತ್ನಿಯರು ಸಹ ಕಾಲ ಕ್ರಮೇಣ ಆಕರ್ಷಣೆ ಕಳೆದುಕೊಳ್ಳುತ್ತಾರೆ~ ಎಂದಿದ್ದರು.

`ಹೊಸ ಗೆಲುವಿನಂತೆಯೇ ಮದುವೆಯಾದ ಹೊಸದರಲ್ಲಿ ಸಂಭ್ರಮವಿರುತ್ತದೆ. ಆದರೆ ವರ್ಷ ಉರುಳಿದಂತೆ ಪತ್ನಿಯರು ಆಕರ್ಷಣೆ ಕಳೆದುಕೊಳ್ಳುತ್ತಾರೆ~ ಎಂದೂ ಹೇಳಿದ್ದರು.

ತಪ್ಪು ಹೇಳಿಕೆ
`ಜೈಸ್ವಾಲ್ ಅವರು ತಪ್ಪು ಹೇಳಿಕೆ ನೀಡಿದ್ದಾರೆ. ಮಹಿಳೆಯನ್ನು ಗೆಲುವಿಗೆ ಹೋಲಿಸುವುದು ಸರಿಯಲ್ಲ. ಮದುವೆಯಾಗಿ ಹಲವು ವರ್ಷಗಳು ಕಳೆದಂತೆ ಸಂಗಾತಿಗಳ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಸಚಿವರು ಬಳಸಿರುವ ಭಾಷೆ ಸರಿ ಇಲ್ಲ. ಅದಕ್ಕಾಗಿ ಅವರು ಕ್ಷಮೆ ಕೇಳಬೇಕು~ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮ ಹೇಳಿದ್ದಾರೆ.

ಈ ಸಂಬಂಧ ನಾವು ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಹೇಳಿಕೆ ಖಂಡಿಸಿ ಕಾನ್ಪುರದಲ್ಲಿ ಹಲವು ಮಹಿಳಾ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತೆಯರು ಜೈಸ್ವಾಲ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದರು.

ರಾಜೀನಾಮೆಗೆ ಒತ್ತಾಯ: ವಿವಾದಿತ ಹೇಳಿಕೆ ನೀಡಿರುವ ಜೈಸ್ವಾಲ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಶಾಂತಾ ಕುಮಾರ್ ಆಗ್ರಹಿಸಿದ್ದಾರೆ. ಮಹಿಳೆಯನ್ನು ದೇವತಾ ಸ್ವರೂಪಿಯಾಗಿ ನೋಡುವ ದೇಶದಲ್ಲಿ ಸಚಿವರು ಆಕೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT