ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಬ್ಲೂಫಿಲಂ ವೀಕ್ಷಣೆ: ಹಲವೆಡೆ ಪ್ರತಿಭಟನೆ

Last Updated 11 ಫೆಬ್ರುವರಿ 2012, 6:00 IST
ಅಕ್ಷರ ಗಾತ್ರ

ಇಳಕಲ್: ಪ್ರಜಾಪ್ರಭುತ್ವದ ಪವಿತ್ರ ಸ್ಥಳವಾದ ವಿಧಾನಸಭೆಯಲ್ಲಿ ಸಚಿವರಾಗಿದ್ದುಕೊಂಡು ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಹಾಗೂ ಕೃಷ್ಣ ಪಾಲೇಮಾರ್ ಅವರು ಬ್ಲೂಫಿಲಂ ನೋಡಿರುವುದು ಅಕ್ಷಮ್ಯ ಅಪರಾಧ. ಮೂವರು ಸಚಿವರು ರಾಜೀನಾಮೆ ನೀಡಿದರೇ ಸಾಲದು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಕೆಪಿಸಿಸಿ ಸದಸ್ಯ ವಿಜಯಾನಂದ ಕಾಶಪ್ಪನವರ ಒತ್ತಾಯಿಸಿದರು.

ನಗರದಲ್ಲಿ ಪ್ರತಿಭಟನೆ ನಡೆಸಿ, ರೇಣುಕಾಚಾರ್ಯ ಹಾಲಪ್ಪರ ಲೈಂಗಿಕ ಹಗರಣಗಳು, ಜನಾರ್ದನರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಇವರೆಲ್ಲರ ನಾಯಕ ಬಿ.ಎಸ್.ಯಡಿಯೂರಪ್ಪ ಬ್ರಷ್ಟಾಚಾರ ಮಾಡಿ ಜೈಲು ಪಾಲಾಗಿರುವುದನ್ನು ಕಂಡರೇ ಇವರಿಗೆ ಅಧಿಕಾರ ಬೇಕಾಗಿರುವುದು ಜನರ ಸೇವೆಗಾಗಿ ಅಲ್ಲ. ಹಣ ಗಳಿಸಲು, ಹೆಣ್ಣನ್ನು ಪಡೆಯಲು ಎಂಬುದು ಸ್ಪಷ್ಟವಾಗಿದೆ. ನೈತಿಕತೆಯ ವಾರುಸುದಾರರಂತೆ ಪೋಸು ಕೊಟ್ಟರೆ ಸಾಲದು, ನೈತಿಕ ನಡುವಳಿಕೆ ಇರಬೇಕು. ಇದ್ಯಾವುದು ಇಲ್ಲದ ಬಿಜೆಪಿ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ದೊಡ್ಡನಗೌಡ ಪಾಟೀಲರ ಮೇಲೂ ಹರಿಹಾಯ್ದು ಕಾಶಪ್ಪನವರ, ಹೈದ್ರಾಬಾದ ರೆಸಾರ್ಟಗೆ ಹೋಗಲು ಜನಾರ್ದನರೆಡ್ಡಿಯಿಂದ ಶಾಸಕ ದೊಡ್ಡನಗೌಡ ಪಾಟೀಲ ರೂ 3 ಕೋಟಿ ಪಡೆದುಕೊಂಡಿದ್ದಾರೆ. ಸಿಬಿಐಗೆ ಈ ಎಲ್ಲ ದಾಖಲೆಗಳು ಸಿಕ್ಕಿದ್ದು, ಅವರು ಜೈಲಿಗೆ ಹೋಗಲಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ನಗರಸಭೆಯ ಆಡಳಿತವು ಸಾರ್ವಜನಿಕ ಕೆಲಸ ಮಾಡುವುದನ್ನು ಬಿಟ್ಟು, ಹಣ ಲೂಟಿ ಮಾಡುತ್ತಿದೆ. ಇದರಲ್ಲಿ ಶಾಸಕರು ಪಾಲು ಪಡೆಯುತ್ತಿದ್ದಾರೆ. ಇವರು ಮಾಡುವ ಅಕ್ರಮಗಳಿಗೆ ಹೆದರಿ ನಗರಸಭೆಗೆ ಪೌರಾಯುಕ್ತರಾಗಿ ಬರಲು ಯಾರು ಒಪ್ಪುತ್ತಿಲ್ಲ ಎಂದು ಟೀಕಿಸಿದರು.

ಇಳಕಲ್ ಬ್ಲಾಕ್ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ ಮಾತನಾಡಿ, ಬಿಜೆಪಿ ಬಣ್ಣ ಬಯಲಾಗಿದೆ. ಹಣ ಲೂಟಿ, ಹೆಣ್ಣು ಮಕ್ಕಳ ಮಾನಭಂಗ, ಈಗ ಪ್ರಜಾತಂತ್ರದ ಪವಿತ್ರ ದೇಗುಲದಲ್ಲಿ ಕಾಮದ ಕಲಾಪ. ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ, ಕೃಷ್ಣ ಪಾಲೇಮಾರ್ ಅವರನ್ನು ಬಂಧಿಸಬೇಕು, ಶಾಸಕತ್ವದಿಂದ ಅನರ್ಹಗೊಳಿಸಬೇಕು, ನೈತಿಕತೆ ಕಳೆದುಕೊಂಡ ಬಿಜೆಪಿ ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಿಜೆಪಿ ಸರಕಾರ, ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ವಿಶೇಷ ತಹಹಶೀಲ್ದಾರ ಎಫ್.ಬಿ.ಗೌಡರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹುನಗುಂದ ಬ್ಲಾಕ್ ಅಧ್ಯಕ್ಷ ಸಿದ್ದಪ್ಪ ಹೊಸೂರ, ಜಿ.ಪಂ. ಸದಸ್ಯರಾದ ಬಸವರಾಜ ಅಂಗಡಿ, ಮಹಾಂತೇಶ ನರಗುಂದ, ಗಂಗಾಧರ ದೊಡಮನಿ, ತಾ.ಪಂ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ ಮತ್ತಿತರರು ಉಪಸ್ಥಿತರಿದ್ದರು.

ಸೆಕ್ಸ್ ಫಿಲಂ ವೀಕ್ಷಣೆ: ಖಂಡನೆ
ಬಾಗಲಕೋಟೆ:      ಸದನದಲ್ಲಿ ಬಿಜೆಪಿ ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ, ಪಾಮಾರ ಅಶ್ಲೀಲ ದೃಶ್ಯಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸಿರುವುದನ್ನು ಮಾಜಿ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಎ.ಎ.ದಂಡಿಯಾ ಖಂಡಿಸಿದ್ದಾರೆ.

ಬಿಜೆಪಿ ಶಿಸ್ತಿನ ಪಕ್ಷವಾಗಿದೆ, ಶಿಸ್ತು ಸಂಘಟನೆ ಕುರಿತು ತನ್ನದೇ ಸ್ಥಾನ ಹೊಂದಿದ್ದು ಆದರೆ ಆ ಪಕ್ಷದವರೇ ಸದನದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದ್ದಾರೆ. ಅಂತಹವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ದಂಡಿಯಾ, ಜಿ.ಎಮ್.ಟಂಕಸಾಲಿ, ಶಿವಾಜಿ ಮಿರಜಕರ ಆಗ್ರಹಪಡಿಸಿದ್ದಾರೆ.

ಅಹಿಂದ ಪ್ರತಿಭಟನೆ
ಮುಧೋಳ: ಸಚಿವರು ಸದನದಲ್ಲಿ ಕುಳಿತು ಬ್ಲೂಫಿಲಂ ವೀಕ್ಷಿಸಿದ್ದನ್ನು ಖಂಡಿಸಿ ಅಹಿಂದ ಸಂಘಟನೆ ಕಾರ್ಯಕರ್ತರು ಪಟ್ಟದಲ್ಲಿ ಪ್ರತಿಭಟನಾ ಮೆರವಣಿ ನಡೆಸಿ, ರಾಜ್ಯ ಸರ್ಕಾರದ ಪ್ರತಿಕತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯ ನಂತರ ತಹಶೀಲ್ದಾರ್ ಶಂಕರಗೌಡ ಸೋಮನಾಳರಿಗೆ ಮನವಿ ಸಲ್ಲಿಸಿದರು.   ಪ್ರಮುಖರಾದ ಕೃಷ್ಣಾ ಮಾದರ ಮಾತನಾಡಿದರು.  ಉದಯ ಕಾಂಬಳೆ, ಹಣಮಂತ ಪೂಜಾರಿ, ಶಂಕರ ಚಿಂಚಖಂಡಿ, ಆರೀಫ್ ಮೋಮಿನ್, ಇಸ್ಮಾಯಿಲ್ ವಾಲೀಕಾರ, ಸಿದ್ದು ದೇವಗೋಳ, ಸತೀಶ ಗಾಡಿ, ಸದಾಶಿವ ಮೇತ್ರಿ, ಗಣೇಶ ಮೇತ್ರಿ, ಯಸೀನ್ ಜಹಾಗಿರದಾರ್, ಎಂ.ಡಿ.ಗಾಯಕವಾಡ, ಜಾವೀದ್ ಸಾಂಗ್ಲೀಕರ್,  ಮಹಮ್ಮದ್ ಜಮಾದಾರ, ನಜೀರ್  ಮಂಟೂರ ಮೊದಲಾದವರು ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ವಜಾಕ್ಕೆ ಆಗ್ರಹ
ಬೀಳಗಿ: ರಾಜ್ಯದ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆದ ಸಂದರ್ಭದಲ್ಲಿ ಅಶ್ಲೆಲ ಚಿತ್ರಗಳನ್ನು ವೀಕ್ಷಿಸುತ್ತ ಕುಳಿತಿದ್ದ ಶಾಸಕರ ಸದಸ್ಯತ್ವವನ್ನೇ ರದ್ದುಗೊಳಿಸಬೇಕು ಹಾಗೂ ಭ್ರಷ್ಟ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರು.

ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಯಕರ್ತರು ಒತ್ತಾಯಿಸಿದರು.  ಪಟ್ಟಣದ ಶಿವಾಜಿ ವೃತ್ತದಿಂದ ತಹಶೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಆರ್.ಎಚ್. ಜಕ್ಕನಗೌಡ್ರ, ಅಶೋಕ ಗಾಣಿಗೇರ, ಅಶೋಕ ಲಾಗಲೋಟಿ, ದಾಕ್ಷಾಯಣಿ ಜಂಬಗಿ, ಟಿ.ವೈ. ಜಾನಮಟ್ಟಿ, ಮುದಕಣ್ಣ ಬಣಗಾರ, ಸಲೀಮ್ ಮೋಮಿನ್, ಬಿ.ಜಿ. ಜಂಗಾಣಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT