ಮೈಸೂರಿನ ಮಾನಸಿಕ ತಜ್ಞರಾದ ಡಾ.ಬಿ.ಎನ್.ರವೀಶ್ ಅವರ ‘ಸಮಗ್ರ ಮಾನಸಿಕ ಆರೋಗ್ಯ - ಅನಾರೋಗ್ಯ ಕೈಪಿಡಿ’ಯಲ್ಲಿ ಮನಸ್ಸಿನ ತವಕತಲ್ಲಣಗಳಿಗೆ ಸಂಬಂಧಿಸಿದ ಇಪ್ಪತ್ತಾರು ಲೇಖನಗಳಿವೆ. ಸಾಮಾನ್ಯ ಓದುಗರಲ್ಲಿ ಮನಃಶಾಸ್ತ್ರದ ಬಗೆಗಿನ ಅರಿವು ಹೆಚ್ಚಿಸುವಂತಿರುವ ಈ ಬರಹಗಳು ತಮ್ಮ ಸರಳ ನಿರೂಪಣೆಯಿಂದಾಗಿ ಗಮನಸೆಳೆಯುತ್ತವೆ.
ಮನೋವ್ಯಾಧಿಯ ಸಾಮಾನ್ಯ ಜ್ಞಾನ ಮತ್ತು ಕಲ್ಪನೆ, ಮನೋರೋಗಗಳ ಬಗ್ಗೆ ನಿಮ್ಮ ನಂಬಿಕೆ; ಯಾವುದು ಸರಿ?, ಮನೋರೋಗ ಏಕೆ ಬರುತ್ತದೆ?, ಮಾನಸಿಕ ಒತ್ತಡಗಳು, ಖಿನ್ನತೆ, ಮನೋರೋಗಿಗಳ ಶುಶ್ರೂಷೆ ಮಾಡುವವರಿಗೆ ಸಲಹೆಗಳು, ಅಪಸ್ಮಾರ, ಮೈಗ್ರೇನ್, ನಿದ್ದೆ, ಮದ್ಯವ್ಯಸನ ಸೇರಿದಂತೆ ಅನೇಕ ವಿಷಯಗಳನ್ನು ರವೀಶ್ ಚರ್ಚಿಸಿದ್ದಾರೆ. ಪ್ರಶ್ನೋತ್ತರ ರೂಪದಲ್ಲಿ, ಟಿಪ್ಪಣಿಗಳ ರೂಪದಲ್ಲಿ, ಪ್ರಶ್ನಾವಳಿ ರೂಪದಲ್ಲಿ- ಹೀಗೆ, ವಿವಿಧ ರೂಪದ ನಿರೂಪಣೆ ಓದುಗರನ್ನು ಸೆಳೆಯುವಂತಿದೆ.
ಪುಸ್ತಕದಲ್ಲಿ ವಿಪುಲ ಮಾಹಿತಿ ಇರುವಂತೆಯೇ ಕಾಗುಣಿತ ದೋಷಗಳೂ ಹೇರಳವಾಗಿವೆ. ‘ಅಕ್ಷರ ಆರೋಗ್ಯ’ದ ಬಗ್ಗೆಯೂ ವೈದ್ಯರು ಗಮನನೀಡಬೇಕಿತ್ತು.