ಹೊಸದುರ್ಗ: ವರ್ಷದಿಂದಲೂ ಕುಡಿಯುವ ನೀರನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ 1ನೇ ಯಾಲಕಪ್ಪನಹಟ್ಟಿಯ ಮಹಿಳೆಯರು ಹಾಗೂ ಗ್ರಾಮಸ್ಥರು ಮಧುರೆ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.
1ನೇ ಯಾಲಕಪ್ಪನಹಟ್ಟಿಗೆ ಅಗತ್ಯ ನೀರಿನ ಸೌಲಭ್ಯಕ್ಕಾಗಿ ಸಿದ್ದರಾಮನಗರ, ಶಿವನೇಕಟ್ಟೆ ಮತ್ತು ಯಾಲಕಪ್ಪನಹಟ್ಟಿಯಲ್ಲಿ ಮೂರು ಬೋರ್ವೆಲ್ ಕೊರೆಸಿದ್ದರೂ ಅವುಗಳಿಗೆ ಮೋಟಾರ್ ಅಳವಡಿಕೆ ಮಾಡಿಲ್ಲ. ಇದರಿಂದ ಜನರಿಗೆ ಹಾಗೂ ಜಾನುವಾರುಗಳಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.
ಯಾಲಕ್ಕಪ್ಪನಹಟ್ಟಿಯ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೂ ಸರಿಯಾಗಿ ಕುಡಿಯುವ ನೀರಿನ ಸೌಲಭ್ಯ ಇಲ್ಲ ಎಂದು ಶಾಲೆಯ ಮುಖ್ಯಸ್ಥ ಮಂಜಪ್ಪ ದೂರಿದರು.
ಪಂಚಾಯ್ತಿ ಅಧ್ಯಕ್ಷ ಅಧಿಕಾರಕ್ಕೆ ಬರುವ ಮೊದಲು ನಮ್ಮ ಗ್ರಾಮಕ್ಕೆ ನೀರಿನ ಸೌಲಭ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಕಾಳಜಿ ಉಳ್ಳವರಾಗಿದ್ದರು. ಆದರೆ, ಈಗ ಏಕೆ ಅವರಲ್ಲಿ ಆ ಕಾಳಜಿ ಬದಲಾಗಿದೆ ಎಂದು 1ನೇ ಯಾಲಕ್ಕಪ್ಪನಹಟ್ಟಿಯ ಕೆಲವು ಗ್ರಾಮಸ್ಥರು ಅಧ್ಯಕ್ಷರ ವರ್ತನೆಯನ್ನು ಖಂಡಿಸಿದರು.
ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎಸ್. ಸಣ್ಣಹನುಮಂತಪ್ಪ, ವೈ.ಟಿ. ರಾಮಚಂದ್ರಪ್ಪ, 1ನೇ ಯಾಲಕಪ್ಪನಹಟ್ಟಿಯ ಗೀತಾಮಣಿ, ಲಕ್ಷ್ಮಮ್ಮ, ಚಿಕ್ಕಮ್ಮ, ಜ್ಯೋತಿ, ಶಿವಮ್ಮ, ಹನುಮಕ್ಕ, ವೈ.ಕೆ. ರಾಜೇಶ್, ಹಾಲೇಶ್, ಶಿಕ್ಷಕ ಮಂಜಪ್ಪ, ಕಷ್ಣಮೂರ್ತಿ, ಪ್ರಕಾಶ್ ಉಪಸ್ಥಿತರಿದ್ದರು.
ಅಧ್ಯಕ್ಷ ಎಂ. ಮುಕುಂದಮೂರ್ತಿ ಅವರು ಸಂಬಂಧಪಟ್ಟ ಎಂಜಿನಿಯರ್ ಎಸ್.ಎನ್. ಪ್ರಸನ್ನಕುಮಾರ್ ಅವರನ್ನು ಕೂಡಲೇ ಸ್ಥಳಕ್ಕೆ ಕರೆಸಿ ಇನ್ನೆರಡು ದಿನದಲ್ಲಿಯೇ ಒಂದನೇ ಯಾಲಕಪ್ಪನಹಟ್ಟಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.