ಭದ್ರಾವತಿ: `ಸುಸ್ಕೃಂತ ಸಮಾಜ ನಿರ್ಮಿಸುವಲ್ಲಿ ದೇವರ ದಾಸಿಮಯ್ಯ ಕೊಡುಗೆ ಅಪಾರ~ ಎಂದು ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಆರುಂಡಿ ನಾಗರಾಜ್ ಹೇಳಿದರು.
ಇಲ್ಲಿನ ದೇವಾಂಗ ಸಂಘದಿಂದ ಶುಕ್ರವಾರ ಬನಶಂಕರಿ ದೇವಾಲಯ ಉದ್ಘಾಟನೆ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ `ಸಮಕಾಲೀನ ಸಂದರ್ಭದಲ್ಲಿ ದೇವರ ದಾಸಿಮಯ್ಯ~ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ವೃತ್ತಿಯಲ್ಲಿ ನೇಯ್ಗೆಗಾರನಾಗಿದ್ದ, ದಾಸಿಮಯ್ಯ ಪ್ರವೃತ್ತಿಯಲ್ಲಿ ವಚನ ಸಾಹಿತಿಯಾಗಿ. ಅಸಮತೋಲನ ಬದುಕಿನ ವ್ಯವಸ್ಥೆಯಲ್ಲಿ ಸಮಾನತೆಯ ಬೀಜ ಬಿತ್ತುವ ಮೂಲಕ ಹಲವು ಸಮಾಜದ ಅಭ್ಯುದಯಕ್ಕೆ ಕಾರಣರಾದರು ಎಂದು ಬಣ್ಣಿಸಿದರು.
11ನೇ ಶತಮಾನದಲ್ಲಿ ಅಡಗಿದ್ದ ದೋಷಗಳನ್ನು ಸರಿ ಮಾಡಲು ಬದಲಾವಣೆ ಪ್ರಯತ್ನವಾಗಿ ಅವರು ನಡೆಸಿದ ಏಕಾಂಗಿ ಹೋರಾಟ 12ನೇ ಶತಮಾನದ ಶಿವಶರಣರ ಆಶಯಕ್ಕೆ ಕಾರಣವಾಯಿತು ಎಂದು ನುಡಿದರು.
ಇಂದು ಕುರ್ಚಿಗಾಗಿ ಎನೆಲ್ಲಾ ನಡೆದಿದೆ ಎಂಬುದನ್ನು ನೋಡುತ್ತಿದ್ದೇವೆ. ಆದರೆ, ಅಂದು ದಾಸಿಮಯ್ಯನಿಗೆ ಸಂಪತ್ತು, ರಾಜ್ಯ ಎಲ್ಲವನ್ನು ನಿಡುತ್ತೇವೆ ಎಂದರು ಬೇಡ ಎಂದು ತಿರಸ್ಕಾರ ಮಾಡುವ ಮೂಲಕ ಮನುಕುಲದ ಶ್ರೇಯಸ್ಸಿಗೆ ಶ್ರಮಿಸಿದ್ದು ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶನ ಎಂದರು.
ವೇದಿಕೆಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ, ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಸಂಘದ ಅಧ್ಯಕ್ಷ ಎ.ಎನ್. ಕೃಷ್ಣಮೂರ್ತಿ, ಸಿ. ವೀರಭದ್ರಯ್ಯ, ಕೆ. ಶಾಮಣ್ಣ, ಎ.ಆರ್. ಶ್ರೀನಿವಾಸ್, ರಾಜೇಶ್ ಇತರರು ಉಪಸ್ಥಿತರಿದ್ದರು.
ಲಾವಣ್ಯ ಪ್ರಾರ್ಥಿಸಿದರು. ಆರ್. ಮಂಜುನಾಥ್ ಸ್ವಾಗತಿಸಿದರು. ಪೂರ್ಣಚಂದ್ರ ಕಾರ್ಯಕ್ರಮ ನಿರೂಪಿಸಿದರು. ಬಿ. ಆಂಜನೇಯ ವಂದಿಸಿದರು.