ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಬದಲಿಸದ ಶಿಕ್ಷಣ: ಕೂಡಿಗೆ ವಿಷಾದ

ದಾವಣಗೆರೆಯಲ್ಲಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ; ಉತ್ತಮ ಶಿಕ್ಷಕರಿಗೆ, ನಿವೃತ್ತರಿಗೆ ಸನ್ಮಾನ
Last Updated 6 ಸೆಪ್ಟೆಂಬರ್ 2013, 5:37 IST
ಅಕ್ಷರ ಗಾತ್ರ

ದಾವಣಗೆರೆ: ಶಿಕ್ಷಣ ಕ್ರಾಂತಿಯಿಂದ ಸಮಾಜದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಬದಲಿಗೆ ಅನಕ್ಷರಸ್ಥ ಜಾತಿವಾದಿ ಅಕ್ಷರಸ್ಥ ಜಾತಿವಾದಿಯಾಗಿ ಬದಲಾಗಿದ್ದಾನೆ ಅಷ್ಟೇ ಎಂದು ಸಾಹಿತಿ ಶ್ರೀಕಂಠ ಕೂಡಿಗೆ ವಿಷಾದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`65 ವರ್ಷಗಳ ಶಿಕ್ಷಣವನ್ನು ಗಣನೆಗೆ ತೆಗೆದುಕೊಂಡರೂ, ಅದು ಅಂತಹ ಪ್ರತಿಫಲ ಕೊಟ್ಟಿಲ್ಲ. ನಮ್ಮ ಶಿಕ್ಷಣ ವಿಫಲವಾಗಿದೆ. ಅದಕ್ಕೆ ನಮ್ಮ ವ್ಯವಸ್ಥೆಯ ಕಾರಣ. ಇಂದು ಏಕರೂಪದ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ' ಎಂದರು.

ನಮ್ಮ ಶಿಕ್ಷಣ ವ್ಯವಸ್ಥೆ ಕೋಟಿಗಳ ಒಳಗೇ ರೂಪುಗೊಳ್ಳುತ್ತಿದೆ. ಒಬ್ಬ ಅಧಿಕಾರಿ ಕೆಟ್ಟರೆ ಒಂದಿಬ್ಬರಿಗೆ ಅನ್ಯಾಯವಾಗುತ್ತದೆ. ಆದರೆ, ಒಬ್ಬ ಅಧ್ಯಾಪಕ ಕೆಟ್ಟರೆ ಇಡೀ ಸಮಾಜ ಹಾಳಾಗುತ್ತದೆ. ಇಂದು ಕೆಲ ಅನರ್ಹರಿಗೂ ಪ್ರಶಸ್ತಿಗಳು ದೊರೆಯುತ್ತಿವೆ' ಎಂದು ಕಳವಳ ವ್ಯಕ್ತಪಡಿಸಿದರು.

ಒಂದು ಜನಾಂಗವನ್ನು ಸ್ಫೂರ್ತಿದಾಯಕವಾಗಿ ಬೆಳೆಯುವಂತೆ ಮಾಡುವುದೇ ನಿಜವಾದ ಶಿಕ್ಷಕರ ಜವಾಬ್ದಾರಿ. ಗೋವಿಂದೇಗೌಡ ಅವರಂಥವರು ಶಿಕ್ಷಣ ಸಚಿವರು ಆಗದೇ ಹೋಗಿದ್ದರೆ, ಅರ್ಹ ಶಿಕ್ಷಕರು ನೇಮಕವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಮಾತನಾಡಿ, ಶಿಕ್ಷಕರು ಆಧುನಿಕ ಸಂವಿಧಾನ ಶಿಲ್ಪಿಗಳು, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಸಾಮಾನ್ಯ ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಉಪ ರಾಷ್ಟ್ರಪತಿ, ರಾಷ್ಟ್ರಪತಿಯಂಥ ಉನ್ನತ ಹುದ್ದೆಗೆ ಏರಿದ್ದು ಶಿಕ್ಷಕ ಸಮುದಾಯಕ್ಕೆ ದೊರೆತ ಗೌರವ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ 12 ಶಿಕ್ಷಕರು ಹಾಗೂ 75 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸಭಾಂಗಣದಲ್ಲಿ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.

ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಸ್.ಟಿ.ಅಂಜನ್‌ಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ಸಿಇಒ ಎ.ಬಿ.ಹೇಮಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ನಾಗರಾಜ್, ಸದಸ್ಯರಾದ ಸುಧಾ ವೀರೇಂದ್ರ ಪಾಟೀಲ್, ಸಹನಾ ರವಿ, ಶಾರದಾ ಉಮೇಶ್‌ನಾಯ್ಕ, ಕರಿಬಸಪ್ಪ, ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ, ಬೆಳವನೂರು ನಾಗರಾಜಪ್ಪ, ಅನ್ನಪೂರ್ಣಾ ಪೂಜಾರ್, ಡಿಡಿಪಿಐ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು. 

`ಅತ್ಯಂತ ಶ್ರೇಷ್ಠ ವೃತ್ತಿ'
ಜಗಳೂರು:
ದೇಶದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವುಳ್ಳ ಶಿಕ್ಷಕ ವೃತ್ತಿ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ ಎಂದು ಬಾಗಲಕೋಟೆಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಹಾಗೂ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಡಾ.ರಾಧಾಕೃಷ್ಣನ್ ಅವರಂತಹ ಮಹಾನ್ ವ್ಯಕ್ತಿಯ ತತ್ವ ಹಾಗೂ ಆದರ್ಶಗಳನ್ನು ಸಮಾಜದಲ್ಲಿ ಪ್ರತಿಯೊಬ್ಬರು ಪಾಲಿಸಬೇಕಿದೆ. ಶಿಕ್ಷಕರು ರಾಷ್ಟ್ರ ನಿರ್ಮಾಣಕಾರರು. ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಬೇಕು ಎಂದರು.

ತಹಶೀಲ್ದಾರ್ ರೇಷ್ಮಾ ಹಾನಗಲ್ ಅವರು ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಅನಾವಣಗೊಳಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

ನಿವೃತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಪಿ. ಪಾಲಯ್ಯ, ಜಯಲಕ್ಷ್ಮೀ ಮಹೇಶ್,  ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಮಾ ಸಿದ್ದಪ್ಪ, ಉಪಾಧ್ಯಕ್ಷೆ ಸವಿತಾ ಪ್ರಕಾಶ್, ತಾ.ಪಂ. ಇಒ ಜಯಣ್ಣ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಾಬುರೆಡ್ಡಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಹಾಜರಿದ್ದರು.  ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ವಿಜೃಂಬಣೆಯಿಂದ ನಡೆಯಿತು.

ಜಾತ್ಯತೀತ ಮನೋಭಾವ ಕಲಿಸುವ ಅಗತ್ಯವಿದೆ
ಹರಿಹರ:
ಶಿಕ್ಷಕರು ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಮಾನವೀಯತೆ, ಮಾತೃಭಾಷೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಜಾತ್ಯತೀತ ಮನೋಭಾವನೆಯನ್ನು ಕಲಿಸುವ ಅಗತ್ಯವಿದೆ ಎಂದು ಸುಧಾ ವಾರ ಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ.ಹನೀಫ್ ಅಭಿಪ್ರಾಯ ಪಟ್ಟರು.

ನಗರದ ಮರಿಯಾ ಸದನದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಮಾಡುವ ಕೆಲಸದಲ್ಲಿ ಆತ್ಮವಂಚನೆ ಇಲ್ಲದೇ, ಪ್ರಾಮಾಣಿಕತೆ ಇದ್ದರೆ, ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸರ್ವೆಪಲ್ಲಿ ರಾಧಾಕೃಷ್ಣ ಅವರ ಜೀವನವೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಸರ್ವೆಪಲ್ಲಿ ರಾಧಕೃಷ್ಣರ ಭಾವಚಿತ್ರದ ಮೆರವಣಿಗೆ ನಡೆಯಿತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವಿಜಯಲತಾ .ಕೆ. ರಾಜು, ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್. ವೀರಭದ್ರಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಎಂ. ವೀರೇಶ್, ಮರಿಯಾ ನಿವಾಸ ಚರ್ಚ್‌ನ ಧರ್ಮಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜಾ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎಂ.ವಿ. ಹೊರಕೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ 2012-13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ  ಪುರಸ್ಕಾರ ನೀಡಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯ ಟಿ. ಮುಕುಂದ, ನಗರಸಭೆ ಸದಸ್ಯರಾದ ಹಬೀಬುಲ್ಲಾ, ಅತಾವುಲ್ಲಾ, ಪ್ರತಿಭಾ ಕುಲಕರ್ಣಿ, ನಗೀನಾ ಸುಭಾನ ಸಾಬ್, ತಹಶೀಲ್ದಾರ್ ಸಿ.ಡಿ. ಗೀತಾ, ತಾಲ್ಲೂಕು ಪಂಚಾಯ್ತಿ ಇಒ ಡಾ.ಎಸ್. ರಂಗಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್. ಬಸವರಾಜಪ್ಪ, ಅಕ್ಷರ ದಾಸೋಹದ ಉಪನಿರ್ದೇಶಕ ಸಂಜೀವಮೂರ್ತಿ, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಂಗಡಿ ಮಲ್ಲಿಕಾರ್ಜುನಪ್ಪ ಹಾಗೂ ತಾಲ್ಲೂಕಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಹಾಜರಿದ್ದರು.

ಶಿಕ್ಷಕರ ಕೊರತೆ ನೀಗಿಸಲು ಯತ್ನ: ರವೀಂದ್ರ
ಹರಪನಹಳ್ಳಿ:
`ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಸತಿ ನಿಲಯಗಳ ಕೊರತೆ ಹಾಗೂ ಶಿಕ್ಷಕರ ಕೊರತೆ ನೀಗಿಸಲು  ಕ್ರಮ ಜರುಗಿಸಲಾಗುವುದು' ಎಂದು ಶಾಸಕ ಎಂ.ಪಿ.ರವೀಂದ್ರ ಹೇಳಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ, ತಾಲ್ಲೂಕು ಪ್ರಾಥಮಿಕ ಹಾಗೂ ಫ್ರೌಢಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಗಳ ಆಶ್ರಯದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಕಷ್ಣನ್‌ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಶಿಕ್ಷಕರು ಸಲ್ಲಿಸಿದ ಬೇಡಿಕೆಗಳಾದ ಗುರುಭವನದ ಮೇಲೆ ಕಟ್ಟಡ ನಿರ್ಮಾಣ ಮಾಡಲು ್ಙ 10 ಲಕ್ಷ ಬೇಡಿಕೆ ಇಟ್ಟಿದ್ದಾರೆ. ಅದನ್ನು ಹಂತ ಹಂತವಾಗಿ ನೀಡಲು ಪ್ರಯತ್ನಿಸುತ್ತೇನೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಸತಿ ಗೃಹ ನಿರ್ಮಾಣಕ್ಕೆ ನಿವೇಶನ ನೀಡಲು ಸ್ಥಳ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ತಾಲ್ಲೂಕಿನ ಶಿಕ್ಷಕರ ವೈದ್ಯಕೀಯ ವೆಚ್ಚ  ್ಙ 50 ಲಕ್ಷಕ್ಕೂ ಹೆಚ್ಚು ಬಾಕಿಯಿರುವುದನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸಲಾಗುವುದು ಎಂದರು.

ನಿವೃತ್ತ ಶಿಕ್ಷಕರಿಗೆ, ನಿಧನ ಹೊಂದಿದ ಶಿಕ್ಷಕರ ಕುಟುಂಬಕ್ಕೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ100ರಷ್ಟು ಸಾಧನೆ ಮಾಡಿದ ಶಾಲೆಗಳ ಮುಖ್ಯಸ್ಥರಿಗೆ ಸನ್ಮಾನ ಮಾಡಲಾಯಿತು. ಡಾ.ಸಿದ್ದನಗೌಡ ಪಾಟೀಲ್ ಉಪನ್ಯಾಸ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬಿ.ಭಾಗ್ಯಮ್ಮ, ಉಪಾಧ್ಯಕ್ಷ ಆರ್.ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ  ಎಸ್.ಮಂಜುನಾಥ, ಸದಸ್ಯ ಜಯಲಕ್ಷ್ಮಿ, ಐ.ವಿಶ್ವನಾಥ, ಚನ್ನಪ್ಪ, ಜಿ.ಪಂ.ಸದಸ್ಯೆ ಹಣ್ಣಿ ಉಮ್ಲಿಬಾಯಿ, ಎಸಿ ಇಬ್ರಾಹಿಂ ಮೈಗೂರು, ಇಒ ಎಂ.ಸಲೀಂ ಪಾಷ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ರಾಜ್ಯ ಪರಿಷತ್ ಸದಸ್ಯ ಕೆ.ಸಿದ್ದಲಿಂನಗೌಡ, ಪುರಸಭೆ ಸದಸ್ಯ ಎಚ್.ಕೆ.ಹಾಲೇಶ್, ಬಿಇಒ ವೀರಣ್ಣ ಎಸ್ ಜತ್ತಿ, ಹಾಗೂ ಇತರರು ಭಾಗವಹಿಸಿದ್ದರು.

ಶಿಕ್ಷಕರೇ ವಂತಿಗೆ ಹಾಕಬೇಕೇ?
ಶಿಕ್ಷಕರೇ ವಂತಿಗೆ ಹಾಕಿಕೊಂಡು ಶಿಕ್ಷಕರ ದಿನಾಚರಣೆ ನಡೆಸುವಂತಹ ಸ್ಥಿತಿ ಇರುವುದಕ್ಕೆ ಬೇಸರವಾಗಿದೆ. ಸರ್ಕಾರದ ವೆಚ್ಚದಲ್ಲಿಯೇ ಶಿಕ್ಷಕರ ದಿನಾಚರಣೆ ನಡೆಯಬೇಕು. ಆದರೆ, ಇದು ಸಾಧ್ಯ ಆಗುತ್ತಿಲ್ಲ ಏಕೆ?

ಶಿಷ್ಟಾಚಾರ ಬಿಡಿ...
ಶಿಕ್ಷಕರ ದಿನಾಚರಣೆಗೆ ಬಾರದ ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಏಕೆ ಹಾಕಬೇಕು? ಈ ಬಗ್ಗೆ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.
-ಶ್ರೀಕಂಠ ಕೂಡಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT