ಚಿಕ್ಕಬಳ್ಳಾಪುರ: ಒಬ್ಬ ವ್ಯಕ್ತಿ ಅಥವಾ ಕುಟುಂಬ ಅಭಿವೃದ್ಧಿಯಾದರೆ ಸಾಲದು, ಸಮುದಾಯ ಅಭಿವೃದ್ಧಿಯಾಗಬೇಕು. ಸಮಾಜದ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರು ಸಂಕಲ್ಪ ತೊಡಬೇಕು ಎಂದು ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಜೆಸಿಐ) ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎ.ಮೋಹನ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಕುಚಿತ ಮನೋಭಾವ ತೊರೆದು ವಿಶಾಲ ದೃಷ್ಟಿಕೋನದಿಂದ ಚಿಂತನೆ ಮಾಡಬೇಕು ಎಂದರು.
ಜೆಸಿಐ ಸಂಸ್ಥೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಕುಮಾರ್ ಮಾತನಾಡಿ, ಸಮಾಜ ಸೇವೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಜೆಸಿಐ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಜಾರಿಗೆ ತರಲಾಗುತ್ತಿದೆ ಎಂದರು.
ನಗರಸಭೆ ಆರೋಗ್ಯ ನಿರೀಕ್ಷಕ ಹೈದರ್ಅಲಿ ಖಾನ್, ಪೊಲೀಸ್ ಸಿಬ್ಬಂದಿ ವಿ.ನಾರಾಯಣಸ್ವಾಮಿ, ನಿವೃತ್ತ ಶಿಕ್ಷಕ ಸಿ.ಆರ್. ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.