ಭದ್ರಾವತಿ: ‘ಸಮುದಾಯ ಬಲವಾಗಿ ಬೆಳೆಯಲು ಸಂಘಟನಾ ಶಕ್ತಿ ಹೆಚ್ಚಬೇಕು’ಎಂದು ಬೆಂಗಳೂರು ಬಬ್ಬೂರು ಕಮ್ಮೆಸೇವಾ ಸಮಿತಿ ಅಧ್ಯಕ್ಷ ಡಾ.ಎ.ವಿ. ಪ್ರಸನ್ನ ಹೇಳಿದರು.ಇಲ್ಲಿನ ಜನ್ನಾಪುರ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಬ್ಬೂರು ಕಮ್ಮೆ ಸೇವಾ ಸಂಘದ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಸಮುದಾಯದ ಕರ್ತವ್ಯವಿದೆ. ಅದಕ್ಕೆ ಆವಶ್ಯವಾಗಿ ಬೇಕಿರುವುದು ಸಂಘಟನೆ ಎಂದು ಕರೆ ನೀಡಿದರು.ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ಈ ಸಮಾಜದ ಬಂಧುಗಳು ಉತ್ತಮ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಇವರು ಮತ್ತಷ್ಟು ಬಲವಾಗಿ ಬೆಳೆಯಲು ನಮ್ಮ ಸಹಕಾರ ಎಂದಿಗೂ ಇದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಂಘದ ಅಧ್ಯಕ್ಷ ಎಚ್.ಎಸ್. ನಂಜುಂಡಯ್ಯ ವಹಿಸಿದ್ದರು. ಬ್ರಾಹ್ಮಣ ಮಹಾಸಭಾ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ, ಮ.ಸ.ನಂಜುಂಡಸ್ವಾಮಿ, ಡಾ.ಹರೀಶ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ಕುಲಬಾಂಧವರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಅದಕ್ಕೂ ಮುನ್ನ ಸಂಘದ ಹಿರಿಯರಾದ ಎಚ್.ಕೆ. ಸುಬ್ಬರಾವ್ ಧ್ವಜಾರೋಹಣ ನೆರವೇರಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.