ಸರಗೂರು: ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ ಬೇಕು ಎಂದು ವರ್ತಕರ ಮಂಡಳಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಶನಿವಾರ ನಡೆದ ಬಂದ್ ಪೂರ್ಣ ಯಶಸ್ವಿಯಾಯಿತು.ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಸರಗೂರು ಪಟ್ಟಣವು ವ್ಯಾಪಾರ ವಹಿವಾಟಿಗೆ ಪ್ರಮುಖ ಕೇಂದ್ರ ಸ್ಥಳವಾಗಿದ್ದು, ಇಲ್ಲಿಗೆ ನೂತನ ಬಸ್ ನಿಲ್ದಾಣ ಬೇಕು ಎಂದು ಕರವೇ ಗೌರವಾಧ್ಯಕ್ಷ ಎಸ್.ಎಲ್.ರಾಜಣ್ಣ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಎಸ್ಆರ್ಟಿಸಿ ಡಿಟಿಓ ಚಂದ್ರ ಶೇಖರ್ ಹಾಗೂ ಡಿಎಂ ಮಕ್ಸೂದ್ ಅಹಮದ್ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.
1960ರಲ್ಲಿ ಪ್ರಾರಂಭವಾದ ಈ ನಿಲ್ದಾಣ ಕಟ್ಟಡ ಸಂಪೂರ್ಣ ಶಿಥಿಲ ವಾಗಿದ್ದು, ಬೀಳುವ ಹಂತ ದಲ್ಲಿದೆ. ಹಾಗಾಗಿ ಇರುವ ಕಟ್ಟಡ ವನ್ನು ಪೂರ್ಣವಾಗಿ ನೆಲಸಮ ಮಾಡಿ ನೂತನ ಬಸ್ ನಿಲ್ದಾಣ ನಿರ್ಮಿಸ ಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಎಸ್ಆರ್ಟಿಸಿ ಡಿಟಿಓ ಚಂದ್ರ ಶೇಖರ್ ಮಾತನಾಡಿ, ಮನವಿಯನ್ನು ನಮ್ಮ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಮೈಸೂರಿನಿಂದ ಸರಗೂರಿಗೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
ವರ್ತಕರ ಮಂಡಳಿ ಅಧ್ಯಕ್ಷ ಎಸ್.ನಾರಾಯಣ್, ಕರವೇ ಪ್ರಧಾನ ಕಾರ್ಯದರ್ಶಿ ಚನ್ನಪ್ಪನಾಯಕ ಮತ್ತು ಯುವ ಮುಖಂಡ ಕೃಷ್ಣ ಮಾತನಾಡಿದರು. ವರ್ತಕರು ಅಂಗಡಿಗಳನ್ನು ಬಂದ್ ಮಾಡಿ ಪೂರ್ಣ ಬೆಂಬಲ ನೀಡಿದರು. ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು, ಸರ್ಕಾರಿ ಕಚೇೀರಿಗಳು ಎಂದಿನಂತೆ ಕೆಲಸ ಕಾರ್ಯ ನಿರ್ವಹಿಸಿದವು.
ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಸಂತೆ ಮಾಳದ ಮಾಸ್ತಮ್ಮ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆ ಹೊರಟಿತು. ಆರ್ಯ ಈಡಿಗರ ರಾಮಮಂದಿರ, ಎರಡನೇ ಮುಖ್ಯರಸ್ತೆ, ಬಸವೇಶ್ವರ ದೇವಸ್ಥಾನ, ಚಿಕ್ಕದೇವಮ್ಮವೃತ್ತ, ಮಹಾವೀರ ವೃತ್ತದ ಮೂಲಕ ಬಸ್ ನಿಲ್ದಾಣಕ್ಕೆ ಪ್ರತಿಭಟನಾಕಾರರ ಮೆರವಣಿಗೆ ತಲುಪಿತು.
ವರ್ತಕರ ಮಂಡಳಿ ಅಧ್ಯಕ್ಷ ಎಸ್.ನಾರಾಯಣ್, ಕಾರ್ಯದರ್ಶಿ ಎನ್.ಎಸ್.ಪ್ರತಾಪ್, ಸುರೇಶ್ಜೈನ್, ಎಸ್.ಎಸ್.ಸೋಮಪ್ರಭಾ, ಎಸ್.ಬಿ. ಬ್ರಹ್ಮದೇವಯ್ಯ, ಕೃಷ್ಣಚಾರ್, ಕರವೇ ನಾಗೇಂದ್ರ, ಗೌರವಾಧ್ಯಕ್ಷ ರಾಜಣ್ಣ, ಎಸ್.ಕೆ.ಶಿವಣ್ಣ, ಚನ್ನಪ್ಪನಾಯಕ, ಎಸ್.ಕೆ.ನಾಗರಾಜು, ಸತೀಶ್ ಕುಮಾರ್, ಲಿಂಗರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬೆಳಗಮ್ಮ ರಂಗಯ್ಯ, ಸದಸ್ಯರು ಕಲೀಲ್, ರಮೇಶ್, ಎಸ್.ಎನ್.ನಾಗರಾಜ್, ನಾಗರಾಜರಾಮ, ಎಸ್.ಎಚ್.ಜಯ ರಾಮ, ಮಾಜಿ ಸದಸ್ಯರು ಶ್ರೀನಿವಾಸ್, ಎಸ್.ಎನ್.ನಾಗರಾಜು, ಮೋಹನ್ ಕುಮಾರ್, ಸರಗೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಎಸ್. ಪ್ರಭುಸ್ವಾಮಿ, ಸುಭಾನ್, ಯುವ ಮುಖಂಡ ರವಿಕುಮಾರ್, ಸಿ.ಬಸವ ರಾಜು, ಕಪಿಲಾ ಟೈಲರ್ ಸಂಘದ ಅಧ್ಯಕ್ಷ ರವಿಕುಮಾರ್, ಮುಜೀಬ್ ಅಹಮದ್, ವರ್ತಕ ಮಂಡಳಿ ಸದಸ್ಯರು, ಕರವೇ ಸದಸ್ಯರು, ಪಟ್ಟಣದ ವಿವಿಧ ಸಂಘ ಸಂಸ್ಥೆ ಯವರು ಬಂದ್ಗೆ ಬೆಂಬಲ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.