ಬೆಂಗಳೂರು: `ಮಕ್ಕಳು ಹೊಸ ಸಂಶೋಧನೆಯತ್ತ ಗಮನ ಹರಿಸಬೇಕು. ಸರಳ ರೀತಿಯಲ್ಲಿ ಅತ್ಯುತ್ತಮವಾದುದನ್ನು ಸಾಧಿಸಲು ಪ್ರಯತ್ನಿಸಬೇಕು~ ಎಂದು ರಾಮನ್ ಸಂಶೋಧನಾ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಜಿ.ಎಸ್.ರಂಗನಾಥ್ ಹೇಳಿದರು.
ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಜವಾಹರಲಾಲ್ ನೆಹರು ತಾರಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಸೈನ್ಸ್ ಇನ್ ಆ್ಯಕ್ಷನ್~ ಪ್ರದರ್ಶನದಲ್ಲಿ ಅವರು ಮಾತನಾಡಿದರು.
`ಮೊದಲು ಸರಳ ರೀತಿಯಲ್ಲಿ ಪ್ರಯೋಗವನ್ನು ಮಾಡಿ, ನಂತರ ಅದು ಮುಂದಿನ ದೊಡ್ಡ ಸಾಧನೆಗೆ ದಾರಿಯಾಗುತ್ತದೆ. ಪಠ್ಯಕ್ರಮಕ್ಕಿಂತ ಪ್ರಯೋಗ ಮಾಡಿ ತಿಳಿದರೆ ಹೆಚ್ಚಿನದನ್ನು ಸಾಧಿಸಬಹುದು~ ಎಂದರು.
`ಶಿಕ್ಷಕರು ಮತ್ತು ಪೋಷಕರ ವಿಚಾರಧಾರೆಗಿಂತ ನಿಮ್ಮ ಸ್ವಂತ ಯೋಚನಾ ಲಹರಿಯಂತೆ ಪ್ರಯೋಗಗಳನ್ನು ಮಾಡಿ~ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
`ಜವಾಹರ ಲಾಲ್ ನೆಹರು ತಾರಾಲಯವು ಪ್ರತಿ ವರ್ಷ ವಿಜ್ಞಾನಕ್ಕೆ ಸಂಬಂಧಿಸಿದಂತೆ ಪ್ರದರ್ಶನವನ್ನು ಏರ್ಪಡಿಸಿಕೊಂಡು ಬರುತ್ತಿದೆ. ಈ ವರ್ಷ ಗಣಿತ ವರ್ಷವಾಗಿದ್ದರಿಂದ ಹೆಚ್ಚು ಗಣಿತಕ್ಕೆ ಸಂಬಂಧಿಸಿದ ಪ್ರಯೋಗಗಳು ಹಾಗೂ ವಿಜ್ಞಾನದ ಪ್ರಯೋಗಗಳ ಪ್ರದರ್ಶನ ನಡೆಯಲಿದೆ. ಒಟ್ಟು 21 ಶಾಲೆಗಳ ಮಕ್ಕಳು 31 ಪ್ರಯೋಗಗಳನ್ನು ಪ್ರಸ್ತುತಪಡಿಸಲಿದ್ದಾರೆ~ ಎಂದು ನೆಹರು ತಾರಾಲಯದ ಉಪ ನಿರ್ದೇಶಕ ಪ್ರಮೋದ್ ಗಲಗಲಿ ತಿಳಿಸಿದರು.
ತಾರಾಲಯದ ನಿರ್ದೇಶಕಿ ಡಾ.ಬಿ.ಎಸ್.ಶೈಲಜಾ ಮಾತನಾಡಿ, `ವಿಜ್ಞಾನದ ತಿಳುವಳಿಕೆ ನೀಡಲು ಸುಮಾರು 15 ವರ್ಷಗಳಿಂದ ಈ ಪ್ರದರ್ಶನವನ್ನು ಏರ್ಪಡಿಸುತ್ತಿದ್ದೇವೆ. ಮಕ್ಕಳಿಗೆ ವಿಜ್ಞಾನ ಕ್ಷೇತ್ರದ ಬಗ್ಗೆ ಪ್ರಯೋಗಾತ್ಮಕವಾದ ವಿಚಾರವನ್ನು ಮೂಡಿಸಲು ಈ ಪ್ರದರ್ಶನ ಸಹಾಯಕವಾಗಿದೆ~ ಎಂದು ಹೇಳಿದರು.
ಪ್ರದರ್ಶನವು ಫೆ.12 ರ ವರೆಗೆ ನಡೆಯಲಿದೆ.