ನವದೆಹಲಿ (ಪಿಟಿಐ): ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದ ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಶನಿವಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.
ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆಡೆಯಿತು. ಪ್ರಾರ್ಥನೆ ಮತ್ತು 21 ಕುಶಾಲ ತೋಪುಗಳ ನಡುವೆ ಯಮುನಾ ನದಿಯ ದಂಡೆಯ ಮೇಲಿನ `ಸ್ಮೃತಿ ಸ್ಥಳ'ದಲ್ಲಿ ಗುಜ್ರಾಲ್ ಅವರ ಅಂತ್ಯಕ್ರಿಯೆ ಪೂರ್ಣಗೊಂಡಿತು.
ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಇಬ್ಬರು ಪುತ್ರರು ಮತ್ತು ಅಕಾಲಿ ದಳದ ಸಂಸದ ನರೇಶ್ ಗುಜ್ರಾಲ್ ಮತ್ತು ಅವರ ಮೊಮ್ಮಗ ನೆರವೇರಿಸಿದರು.
ರಕ್ಷಣಾ ಸಚಿವ ಎ.ಕೆ.ಆಂಟನಿ, ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ, ಕಾನೂನು ಅಶ್ವಿನ್ ಕುಮಾರ್, ವಾಣಿಜ್ಯ ಸಚಿವ ಆನಂದ ಶರ್ಮಾ, ಕೇಂದ್ರ ಸಚಿವರಾದ ಫಾರೂಕ್ ಅಬ್ದುಲ್ಲಾ, ಜೈಪಾಲ್ ರೆಡ್ಡಿ, ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಅರುಣ್ ಜೇಟ್ಲಿ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ಹಲವು ಗಣ್ಯರು, ವಿವಿಧ ರಾಷ್ಟ್ರಗಳ ರಾಜತಾಂತ್ರಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.