ಹುಮನಾಬಾದ: ಸರ್ಕಾರಿ ಶಾಲೆಗಳ ಬಗ್ಗೆ ಯಾರೊಬ್ಬರೂ ತಾತ್ಸಾರ ಮನೋಭಾವ ತೋರದೆ ಶಾಲೆಯ ಗೌರವ ಹೆಚ್ಚಸಲು ಶ್ರಮಿಸಬೇಕು ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಇಲ್ಲಿನ ಆಲ್–ಅಮಿನ್ ಉರ್ದು ಮಾಧ್ಯಮ ಶಾಲೆಯಲ್ಲಿ ಮಂಗಳ ವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಮುಖ್ಯಗುರುಗಳು ಹಾಗೂ ಸಿಬ್ಬಂದಿ ಶಾಲೆ ಪ್ರಗತಿಗೆ ಶ್ರಮಿಸಬೇಕು. ವಿವಿಧ ಹಂತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು. ಇದರಿಂದ ಸರ್ಕಾರಿ ಶಾಲೆ ಬಗ್ಗೆ ಗೌರವ ಹೆಚ್ಚುತ್ತದೆ. ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಕಾರಣಕ್ಕಾಗಿ ಶಿಕ್ಷಕರಲ್ಲಿ ಕರ್ತವ್ಯ ಪ್ರಜ್ಞೆ ಮೂಡಿದರೆ ಎಲ್ಲ ಮಕ್ಕಳಿಗೆ ಗುಣಮಟ್ಟದ ಕೊಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಮೇಲಧಿಕಾರಿಗಳು ಶಾಲಾ ಭೇಟಿ, ಪ್ರಗತಿ ಪರಿಶೀಲನೆ ನಡೆಸುವುದನ್ನು ದಾಖಲಿಸಲು ಡೈರಿ ಇಡಬೇಕು. ಪ್ರತಿ 3 ತಿಂಗಳಿಗೊಮ್ಮೆ ಶಾಲಾ ಪಾಲಕರ ಸಭೆ ಕರೆದು ಕುಂದು– ಕೊರತೆ ಆಲಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಅವರ ಪಾತ್ರದ ಮನವರಿಕೆ ಮಾಡಿಕೊಡಬೇಕು. ಗುಣಮಟ್ಟದ ಶಿಕ್ಷಣ ನೀಡಿ, ಫಲಿತಾಂಶ ಸುಧಾರಣೆ ಕಾರ್ಯಾಗಾರ ಆಯೋಜಿ ಸಲು ಕ್ಷೇತ್ರಶಿಕ್ಷಣಾಧಿಕಾರಿಗೆ ಸೂಚನೆ ನೀಡಿದರು.
ಕೆಲ ಶಾಲೆಗಳ ಶಿಕ್ಷಕರ ಹಾಜರಿ ಪುಸ್ತಕದಲ್ಲಿ 4–5 ದಿನಗಳ ವರೆಗಿನ ಹಸ್ತಾಕ್ಷರ ಮುಂಚಿತವಾಗಿಯೇ ಹಾಕುವುದು ಗಮನಕ್ಕೆ ಬಂದಿದೆ. ಶಾಲೆಗಳಿಗೆ ಆಕಸ್ಮಿಕ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿವೆ. ಶಿಕ್ಷಕರು ಮಾತ್ರವಲ್ಲ ಸಿ.ಆರ್.ಸಿ ಹಂತದಿಂದ ಕ್ಷೇತ್ರಶಿಕ್ಷಣಾಧಿ ಕಾರಿ ವರೆಗಿನ ಎಲ್ಲರ ವಿರುದ್ಧ ಕ್ರಮ ಜರುಗಿಸಲಾ ಗುತ್ತದೆ. ಬೇಜವಾಬ್ದಾರಿ ಪ್ರದರ್ಶಿಸುವ ಅಧಿಕಾರಿ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಂತೋಷಮ್ಮ ಕೌಡ್ಯಾಳೆ ಮಾತನಾಡಿ, ಸರ್ಕಾರದ ಯಾವುದೇ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮಾತ್ರ ಹಾಕುತ್ತಾರೆ. ಸೌಜನ್ಯಕ್ಕಾಗಿ ಒಮ್ಮೆಯಾದರೂ ಕರೆ ಮಾಡಿ ತಿಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ, ತಾ.ಪಂ ಅಧ್ಯಕ್ಷೆ ಜಗದೇವಿ ಪ್ರಕಾಶ ಕಾಡಗೊಂಡ, ಉಪಾಧ್ಯಕ್ಷೆ ನಿಸಾಬೀ ಖಾಜಾಮಿಯ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಗಜೇಂದ್ರ ಕನಕಟಕರ್, ಪುರಸಭೆ ಸದಸ್ಯ ಅಪ್ಸರಮಿಯ್ಯ ಇದ್ದರು. ಬಿ.ಆರ್.ಸಿ ಅಧಿಕಾರಿ ಮಾಣಿಕಪ್ಪ ಬಕ್ಕನ್ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ,ಆರ್.ಸಿ ರಮೇಶ ಕಲ್ಯಾಣಿ ನಿರೂಪಿಸಿ, ವಿಶ್ವನಾಥ ಪಾಟೀಲ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.