ಸೊರಬ: ದಂಡಾವತಿ ಆಣೆಕಟ್ಟು ಯೋಜನಾ ಪ್ರದೇಶದ ಸರ್ವೇ ಕಾರ್ಯಕ್ಕೆ ಯಾವುದೇ ಅಧಿಕಾರಿಗಳು ಬರಲು ಬಿಡುವುದಿಲ್ಲ. ಎಷ್ಟೇ ಬಲ ಪ್ರಯೋಗ ಮಾಡಿದರೂ ಯೋಜನೆ ಆಗದಂತೆ ತಡೆಯುವುದು ಖಚಿತ ಎಂದು ದಂಡಾವತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಾಮದೇವಗೌಡ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಬುಧವಾರ ದಂಡಾವತಿ ನದಿಗೆ ಆಣೆಕಟ್ಟು ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ದಂಡಾವತಿ ಯೋಜನಾ ಪ್ರದೇಶದಲ್ಲಿ ಅಧಿಕಾರಿಗಳು ಸರ್ವೇ ನಡೆಸಲು ಬರುತ್ತಾರೆ ಎಂಬ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹೆಗ್ಗೋಡು, ನಿಸರಾಣಿ, ಹಳೇ ಸೊರಬ ಗ್ರಾಮ ಪಂಚಾಯ್ತಿಯಿಂದ ನಡೆದ ಗ್ರಾಮಸಭೆಯಲ್ಲಿ ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಯೋಜನೆ ಸಾಧುವಲ್ಲ ಎಂದು ಈಗಾಗಲೇ ಹಲವು ಬಾರಿ ಮನವರಿಕೆ ಮಾಡಿದ್ದರೂ ಸಹ ಜನಪ್ರತಿನಿಧಿಗಳು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ. ಯಾವುದೇ, ಅಧಿಕಾರಿ ಬರದಿದ್ದರೂ ಸ್ಥಳೀಯ ಶಾಸಕ ಮತಗಳಿಕೆಯ ಉದ್ದೇಶದಿಂದ ಶೀಘ್ರದಲ್ಲಿ ಯೋಜನೆ ಆರಂಭಗೊಳ್ಳಲಿದೆ ಎಂದು ಹೇಳಿಕೆ ನೀಡುತ್ತಾ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಇಂತಹ ಕೆಲಸ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ ಎಂದು ದೂರಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥ ಗೌಡ ಮಾತನಾಡಿ, ಸೊರಬ ತಾಲ್ಲೂಕು ಏಷ್ಯಾದಲ್ಲಿಯೇ ಅತೀ ಹೆಚ್ಚು ಕೆರೆಗಳನ್ನು ಹೊಂದಿದ್ದು, ಕೆರೆಗಳ ಹೂಳೆತ್ತಿ ಅಂತರ್ಜಲ ಗುಣಮಟ್ಟ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಲಿ ಎಂದರು.
ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಬರುತ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಮಂಗಳವಾರ ರಾತ್ರಿಯಿಂದಲೇ ಯೋಜನಾ ಪ್ರದೇಶದಲ್ಲಿ ಸಂತ್ರಸ್ತರು ಟೈರ್ಗೆ ಬೆಂಕಿ ಹಚ್ಚಿ ಕಾವಲು ಕಾಯುತ್ತಿದ್ದರು.
ಜನಸಂಗ್ರಾಮ ಪರಿಷತ್ನ ಆರ್. ಕೃಷ್ಣಪ್ಪ ರಿಪ್ಪನ್ಪೇಟೆ, ಸರ್ಜಾ ಶಂಕರ, ಕಬಸೆ ಅಶೋಕಮೂರ್ತಿ, ವಿಶ್ವನಾಥಗೌಡ ಸಾಗರ, ಮಂಜಪ್ಪ ಬನದಕೊಪ್ಪ, ನಡಳ್ಳಿ ರಾಜಪ್ಪ, ಕುಪ್ಪೆ ಜಗದೀಶ, ಶಶಿಕಲಾ, ರೇಣುಕಮ್ಮ, ನಾಗರತ್ನಾ, ಭರ್ಮಮ್ಮ, ಅರುಣಾಕ್ಷಿ, ಶಿವಪ್ಪ ನಡಹಳ್ಳಿ, ನವೀನ, ಉದಯ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.