ಮೂಲ್ಕಿ: ಸಸಿಹಿತ್ಲು ಘಟಕ, ಇಲ್ಲಿನ ಮಂಗಳೂರು ಯುವವಾಹಿನಿಯ ಕೇಂದ್ರ ಸಮಿತಿ ಸಂಯೋಜನೆಯಲ್ಲಿ ಭಾನುವಾರ ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಂತರ್ ಘಟಕದ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಯಲ್ಲಿ ‘ಐಸಿರಿ-2011’ ಪ್ರಶಸ್ತಿ ಗೆದ್ದುಕೊಂಡಿತು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಈ ಅಂತರ ಘಟಕ ಸ್ಪರ್ಧೆಯಲ್ಲಿ ಒಟ್ಟು 12 ಘಟಕವು ಭಾಗವಹಿಸಿದ್ದು, ದ್ವಿತೀಯ ಬಹುಮಾನವನ್ನು ಪಡುಬಿದ್ರಿ ಘಟಕ ಪಡೆದರೆ, ಬಂಟ್ವಾಳ ಘಟಕ ತೃತೀಯ ಬಹುಮಾನ ಪಡೆಯಿತು. ಮೂರು ತಂಡಗಳಿಗೂ ನಗದು ಪುರಸ್ಕಾರದೊಂದಿಗೆ ಶಾಶ್ವತ ಫಲಕ ನೀಡಲಾಯಿತು.
ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ಬಹುಮಾನ ವಿತರಿಸಿದರು. ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ವಿದ್ಯಾನಿಲಯದ ಉಪನ್ಯಾಸಕ ಡಾ.ಸುಧೀರ್ ರಾಜ್ ಪ್ರಧಾನ ತೀರ್ಪುಗಾರರಾಗಿದ್ದರು. ಮಂಗಳೂರು ಯುವವಾಹಿನಿಯ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ಸದಾನಂದ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಸಹಕರಿಸಿದ್ದ ಡಾ.ಸುಧೀರ್ ರಾಜ್, ಸುನಿತಾ ಶ್ರೀಪತಿ ಉಪಾಧ್ಯಾಯ, ಹರಿಶ್ಚಂದ್ರ ಮೂಡಬಿದಿರೆ ಅವರನ್ನು ಗೌರವಿಸಲಾಯಿತು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರವೀಣ್ ಉಡುಪಿ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಮರೋಳಿ, ಮೂಲ್ಕಿ ಘಟಕದ ಅಧ್ಯಕ್ಷ ಜಯಕುಮಾರ್ ಕುಬೆವೂರು, ಕಾರ್ಯದರ್ಶಿ ರಾಮಚಂದ್ರ ಕೋಟ್ಯಾನ್, ಮೂಲ್ಕಿ ಚಂದ್ರಶೇಖರ ಸುವರ್ಣ, ಉದಯ ಅಮಿನ್ಮಟ್ಟು, ವಿಜಯಕುಮಾರ್ ಕುಬೆವೂರು, ನರೇಂದ್ರ ಇದ್ದರು.