ಸಾಗರ: ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ನಗರಸಭೆ ನಿರ್ಮಿಸುತ್ತಿರುವ ರಂಗಮಂದಿರ ಕಾಮಗಾರಿ ವಿಳಂಬ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ರಸ್ತೆತಡೆ ನಡೆಸಿದರು.
ವಿವಿಧ ಬಡಾವಣೆಗಳಲ್ಲಿ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದು, ನಗರಸಭೆ ಅವುಗಳನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ಹಲವು ವರ್ಷಗಳ ಹಿಂದೆಯೇ ರಂಗಮಂದಿರ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿ ಭಾಗಶಃ ಕಾಮಗಾರಿ ನಡೆದಿದ್ದರೂ ನಂತರ ಅದನ್ನು ಮುಂದುವರಿಸದೇ ಇರುವುದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದರು.
ಅನೇಕ ಕಡೆ ಹೊಸದಾಗಿ ನಿರ್ಮಿಸಿರುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅವುಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ವಾರ್ಡ್ನಂ. 15, 17 ಹಾಗೂ ರಾಮನಗರ ಬಡಾವಣೆಗಳಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡಿರುವವರು ಮನೆಯನ್ನು ತೆರವುಗೊಳಿಸುವಂತೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಆಶ್ರಯ ನಿವೇಶನ ಹಾಗೂ ಆಶ್ರಯ ಮನೆಗಳಿಗೆ ಹಕ್ಕುಪತ್ರ ವಿತರಿಸಿಲ್ಲ. ಈ ಕೆಲಸಕ್ಕೆ ಕೂಡಲೇ ಚಾಲನೆ ನೀಡಬೇಕು. ರಾಷ್ಟ್ರೀಯ ವಿಮಾ ಯೋಜನೆ ಅರ್ಜಿ ಸಲ್ಲಿಸಲು ಇರುವ ಕಾಲಾವಕಾಶವನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.
ಕಾಂಗ್ರೆಸ್ನ ಪ್ರಮುಖರಾದ ಮಹಮ್ಮದ್ ಖಾಸಿಂ, ಐ.ಎನ್.ಸುರೇಶ್ಬಾಬು, ನಂದಾ ಗೊಜನೂರು, ಕಾಗೋಡು ಅಣ್ಣಪ್ಪ, ಹರೀಶ್ಗೌಡ, ಸುಂದರ್ಸಿಂಗ್, ವಡ್ನಾಲ್ ಕೃಷ್ಣಪ್ಪ,ಡಿ. ದಿನೇಶ್, ಸುರೇಶ್ಕುಮಾರ್, ಎನ್. ಶ್ರೀನಾಥ್, ಗಣಪತಿ ಸುಳಗೋಡು, ಅಬ್ದುಲ್ ಹಮೀದ್ ಇನ್ನಿತರರು ಪಾಲ್ಗೊಂಡಿದ್ದರು.