ಬಾಳೆಹೊನ್ನೂರು: ತಿಂಗಳ ಹಿಂದೆ ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯ ಎಲೆಕಲ್ಲು ಸಾಗುವಾನೆ ನೆಡುತೋಪಿನಲ್ಲಿ ನಡೆದಿದ್ದ ಸಾಗುವಾನೆ ಮರ ಕಳವು ಪ್ರಕರಣವನ್ನು ಬೇಧಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಎಲೆಕಲ್ಲು ತಿರುವಿನಲ್ಲಿ ಭಾರೀ ಗಾತ್ರದ ಸಾಗುವಾನೆ ಮರವನ್ನು ಕಳವು ಮಾಡಿದ್ದು, ಮೊಬೈಲ್ ಕರೆಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.
ಆರೋಪಿಗಳಾದ ಮೂಡಿಗೆರೆ ತಾಲ್ಲೂಕಿನ ಮಣಿಕುಮಾರ್, ಸುರೇಂದ್ರ ಅಲಿಯಾಸ್ ಪಚ್ಚ, ಮಣಿಯನ್ನು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದು, 2.40 ಲಕ್ಷ ರೂಪಾಯಿ ಮೌಲ್ಯದ ಸಾಗುವಾನೆ ಮರಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಆರೋಪಿಗಳು ಬೆಂಗಳೂರಿನ ಮಾಗಡಿ ರಸ್ತೆಯ ಮಾರುತಿ ಟಿಂಬರ್ ಸಾಮಿಲ್ ನಲ್ಲಿ ಮರಗಳನ್ನು ಇರಿಸಿದ್ದು, ಬೆಂಗಳೂರು ಸಂಚಾರಿ ಅರಣ್ಯದಳದ ಸಹಯೋ ಗದೊಂದಿಗೆ ಕಾರ್ಯಾಚರಣೆ ನಡೆಸಿ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಳೆಹೊನ್ನೂರು ವಲಯದ ಸುತ್ತಮುತ್ತ ಸಾಗುವಾನೆ ಕಳವು ಜಾಲ ಬೃಹತ್ ಆಗಿ ವ್ಯಾಪಿಸಿದ್ದು, ವಲಯ ಅರಣ್ಯಾಧಿಕಾರಿಗಳ ಚಲನವಲನದ ಕುರಿತು ಮೊಬೈಲ್ನಲ್ಲಿ ಸುದ್ದಿ ರವಾನೆಯಾಗುತ್ತಿದ್ದ ಅಂಶ ಬೆಳಕಿಗೆ ಬಂದಿದೆ.
ಠಾಣಾಧಿಕಾರಿ ಬಿ.ಎಸ್.ಮಂಜುನಾಥ್ ಅವರು ಮೊಬೈಲ್ ಟ್ರ್ಯಾಪಿಂಗ್ ಮಾಡುವ ಮೂಲಕ ಪ್ರಕರಣ ಪತ್ತೆ ಹಚ್ಚಲು ಸಹಕರಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಜಿ.ಕೆ.ಸುದರ್ಶನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.