ಚಿಕ್ಕಬಳ್ಳಾಪುರ: ದೇಶದ ರಾಷ್ಟ್ರಗೀತೆಗೆ ನೂರು ವರ್ಷ ಪೂರೈಸಿದ ಮತ್ತು ನೇತಾಜಿ ಸುಭಾಷಚಂದ್ರ ಬೋಸ್ ಜನ್ಮದಿನದ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಪ್ರೌಢಶಾಲಾ ಹಂತದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಸೀತಾರಾಮ ರೆಡ್ಡಿ ಮಾತನಾಡಿ, `ದೇಶಭಕ್ತಿ ಮತ್ತು ದೇಶಾಭಿಮಾನವನ್ನು ಪ್ರತಿಯೊಬ್ಬರು ಮೂಡಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸಬೇಕು~ ಎಂದರು.
ರಸಪ್ರಶ್ನೆ ಸ್ಪರ್ಧೆಯ ಮೊದಲ ಬಹು ಮಾನವನ್ನು ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಾದ ಮೇಘನಾ, ಅಕ್ಷತಾ, ಚೇತನ್ ಮತ್ತು ವರುಣ್ ಪಡೆದರು.
ದ್ವಿತೀಯ ಬಹುಮಾನವನ್ನು ಚಿಕ್ಕ ಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಾದ ವಂಶಿ, ಅಖಿಲ್, ತ್ರಿವೇಣಿ ಮತ್ತು ಹಿಮಾ ಪಡೆದರು. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪವಿತ್ರಾ, ಶ್ರುತಿ, ಮಹೇಶ್ ಮತ್ತು ಪ್ರವೀಣ್ಕುಮಾರ್ ಮೂರನೇ ಬಹುಮಾನ ಪಡೆದರು. ಎಲ್ಲರಿಗೂ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಲಾಯಿತು.
ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಜಿ.ನಾರಾಯಣಸ್ವಾಮಿ, ಸಾದಲಿ ಎಸ್ಡಿಎಂಸಿ ಅಧ್ಯಕ್ಷ ಆದಿನಾರಾಯಣಶೆಟ್ಟಿ, ಸದಸ್ಯರಾದ ಪ್ರಭುದೇವ್, ಎಸ್.ದೇವಗಾನಹಳ್ಳಿ ಎಸ್ಡಿಎಂಸಿ ಅಧ್ಯಕ್ಷ ಡಿ.ವಿ.ಪ್ರಸಾದ್, ಶಿಕ್ಷಕರಾದ ಶ್ರಿನಿವಾಸ್, ಬಿ.ಜಯರಾಮ್, ನಾಗಾರಾಜ್, ಈಶ್ವರ್ ಸಿಂಗ್, ಎಂ.ಬಾಬು, ಸುಮಯಾ ಶಭಾನ, ಕೆ.ಸಿ.ಮಂಜುನಾಥ್, ಎಸ್.ಸಿ.ಪ್ರಭಾಕರ್ ಮತ್ತು ಸುಧಾಕರ್ರೆಡ್ಡಿ ಉಪಸ್ಥಿತರಿದ್ದರು.