ಕಮಲಾನಗರದ ಸಾಧನ ಸಂಗಮ ಟ್ರಸ್ಟ್ ತನ್ನ 25ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮವನ್ನು ವಿವಿಧ ನೃತ್ಯ ಪ್ರದರ್ಶನಗಳ ಮೂಲಕ ಆಚರಿಸಿತು.
ಮಲ್ಲೇಶ್ವರದ ಸೇವಾಸದನದಲ್ಲಿ ಗೀತಾಕೃಷ್ಣ ಅವರ ಭರತನಾಟ್ಯ ಹಾಗೂ ಪದ್ಮಪ್ರಿಯಾ ಪ್ರವೀಣ್ ಅವರು ನಡೆಸಿಕೊಟ್ಟ ಕೂಚಿಪುಡಿ ಕಾರ್ಯಕ್ರಮ ನೃತ್ಯಾಸಕ್ತರನ್ನು ರಂಜಿಸಿದವು. ಗೀತಾಕೃಷ್ಣ ವಿದುಷಿ ಜ್ಯೋತಿ ಪಟ್ಟಾಭಿರಾಮ್ ಅವರಲ್ಲಿ ಭರತನಾಟ್ಯ ನೃತ್ಯಾಭ್ಯಾಸ ಮಾಡಿದ್ದಾರೆ. ಪದ್ಮಪ್ರಿಯಾ ಪ್ರವೀಣ್ ಅವರು ಶೋಭಾ ನಾಯ್ಡು ಅವರಲ್ಲಿ ಕೂಚಿಪುಡಿ ಅಭ್ಯಾಸ ಮಾಡಿದ್ದಾರೆ.
ನಟರಾಜನನ್ನು ನಮಿಸಿ ಗೀತಾಕೃಷ್ಣ ಅವರು ಭರತನಾಟ್ಯ ಆರಂಭಿಸಿದರು. ಏಕತಾಳದ ಅಲರಿಪುವಿನೊಂದಿಗೆ ನೃತ್ಯ ಪ್ರದರ್ಶನಕ್ಕೆ ನಾಂದಿ ಹಾಡಿದರು. ಆದಿ ತಾಳದ ರಾಗಮಾಲಿಕೆಯ ನವಾವರಣ ಎಂಬ ನವ ದೇವಿಯರ ವರ್ಣನೆಯನ್ನು ಸೊಗಸಾಗಿ ಅಭಿನಯಿಸಿದರು. ನಂತರ ಕಲ್ಯಾಣಿ ರಾಗ ರೂಪಕ ತಾಳದ ಸೊಗಸಾದ ಒಂದು ಜಾವಳಿಯನ್ನೂ ಪ್ರದರ್ಶಿಸಿದರು.
ಶೋಭಾ ನಾಯ್ಡು ಅವರು ರಾಗಮಾಲಿಕೆ ಆದಿತಾಳದಲ್ಲಿ `ನಾರಾಯಣೇಯಂ~ಅನ್ನು ಪ್ರದರ್ಶಿಸಿ ನಂತರ ಸದಾಶಿವ ಬ್ರಹ್ಮೇಂದ್ರರಿಂದ ವಿರಚಿತವಾದ `ಮಾನಸ ಸಂಚದರೇ~ ಎಂಬ ಗೀತೆಗೆ ತಟ್ಟೆಯ ಮೇಲೆ ನರ್ತಿಸಿ ನೃತ್ಯ ವೈಶಿಷ್ಟ್ಯತೆ ಮೆರೆದರು. ನಂತರ ರಾಗಮಾಲಿಕೆ ಖಂಡ ಚಾಪು ತಾಳದಲ್ಲಿ `ಶಿವಾಷ್ಟಕಂ~ ಪ್ರದರ್ಶಿಸಿ ಪ್ರೇಕ್ಷಕರಿಂದ ಚಪ್ಪಾಳೆಯ ಮೆಚ್ಚುಗೆ ಪಡೆದರು.
ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಪ್ರಭಾಕರರೆಡ್ಡಿ ಮತ್ತಿತರರು ಈ ಸಂದರ್ಭಕ್ಕೆ ಸಾಕ್ಷಿಯಾದರು.