ನವದೆಹಲಿ (ಪಿಟಿಐ): ತಂಡದಲ್ಲಿ ಮತ್ತೆ ಸ್ಥಾನ ಸಿಕ್ಕಿದ್ದಕ್ಕೆ ಸಂತಸವಾಗಿದೆ, ಇನ್ನು ಮುಂದೆ ಪ್ರದರ್ಶನವೇ ನನ್ನ ಮಾತಾಗುತ್ತದೆ... -ಹೀಗೆಂದು ಹೇಳಿದ್ದು ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಿರುವ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಎಡಗೈ ಸ್ಪಿನ್ ಬೌಲರ್ ಪ್ರಗ್ಯಾನ್ ಓಜಾ.
`ಖಂಡಿತ ಈಗ ಸಮಾಧಾನ. ದೇಶದ ತಂಡದ ಸಮವಸ್ತ್ರ ತೊಡಲು ಯಾರಿಗೆ ಸಂತೋಷ ಆಗುವುದಿಲ್ಲ ಹೇಳಿ?~ ಎಂದ ಅವರು `ನಿರಂತರವಾಗಿ ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದೇನೆ. ನನ್ನ ಪರವಾಗಿ ನನ್ನ ಆಟವೇ ಮಾತನಾಡಬೇಕು ಎನ್ನುವುದೇ ಆಶಯ~ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕ್ರಿಕೆಟ್ನ ಮೂರು ಪ್ರಕಾರಗಳಲ್ಲಿಯೂ ಉತ್ತಮ ಆಟವಾಡುವುದು ತಮ್ಮ ಗುರಿ ಎಂದು ಹೇಳಿದ ಓಜಾ `ಹೊಸ ಕ್ರಿಕೆಟ್ ಋತುವಿನ ಆರಂಭ ಆಗಲಿದೆ. ಮೊದಲ ಪಂದ್ಯದಿಂದಲೇ ಚೆನ್ನಾಗಿ ಆಡಬೇಕು. ಆಗಲೇ ಮುಂದಿನ ದೀರ್ಘ ಹಾದಿಯಲ್ಲಿ ಸಾಗಲು ವಿಶ್ವಾಸ ಹೆಚ್ಚುತ್ತದೆ~ ಎಂದರು.