ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಭದ್ರತಾ ಯೋಜನೆ: ಫಲಾನುಭವಿ ಆಯ್ಕೆ ಶೀಘ್ರ ಆರಂಭ

Last Updated 11 ಜನವರಿ 2012, 9:35 IST
ಅಕ್ಷರ ಗಾತ್ರ

ಕೊಪ್ಪಳ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗಾಗಿ ಅರ್ಜಿ ಸಲ್ಲಿಸಿರುವವ ಪೈಕಿ ಅರ್ಹರ ಆಯ್ಕೆ ಹಾಗೂ ವಿವಿಧ ವೇತನ ಮಂಜೂರು ಮಾಡುವ ಕಾರ್ಯ ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಫೆಬ್ರವರಿಯಿಂದ ಈ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ, ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಸಲುವಾಗಿ ಕೈಗೊಂಡಿದ್ದ ಭೌತಿಕ ಪರಿಶೀಲನಾ ಕಾರ್ಯವು ಶೇ 100ರಷ್ಟು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೊಸದಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ವೇತನ ಮಂಜೂರು ಮಾಡುವ ಪ್ರಕ್ರಿಯೆ ಆರಂಭಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಶೋಕಕುಮಾರ್ ಮನೋಳಿ ಅವರು 6.1.2011ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ಜನ ಅನರ್ಹ ಫಲಾನುಭವಿಗಳು ಪಿಂಚಣಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭೌತಿಕ ಪರಿಶೀಲನಾ ಕಾರ್ಯ ಕೈಗೆತ್ತಿಕೊಂಡಿತ್ತು. ಪರಿಶೀಲನೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 21,796 ಜನ ಅನರ್ಹ ಫಲಾನುಭವಿಗಳು ಇರುವುದು ಪತ್ತೆಯಾಗಿದೆ.

ಕೊಪ್ಪಳ ತಾಲ್ಲೂಕಿನಲ್ಲಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದ 1,377 ಜನ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲಾಗಿದೆ. ಅದೇ ರೀತಿ 760 ಜನ ಮಹಿಳೆಯರು ನಿರ್ಗತಿಕ ವಿಧವಾ ವೇತನ, 817 ಜನ ಅಂಗವಿಕಲರ ವೇತನ, 3,794 ಜನ ಸಂಧ್ಯಾ ಸುರಕ್ಷಾ ಯೋಜನೆಯ ಲಾಭ ಪಡೆಯುತ್ತಿದ್ದದು ಸಹ ಅಕ್ರಮ ಎಂಬುದು ಪರಿಶೀಲನೆಯಿಂದ ಬಹಿರಂಗಗೊಂಡಿದೆ.

ಗಂಗಾವತಿ ತಾಲ್ಲೂಕಿನಲ್ಲಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದ 1,762 ಅನರ್ಹ ಫಲಾನುಭವಿಗಳಿದ್ದರೆ, ನಿರ್ಗತಿಕ ವಿಧಾನ ವೇತನ-1,882, ಅಂಗವಿಕಲ ವೇತನ-729, ಸಂಧ್ಯಾ ಸುರಕ್ಷಾ ಯೋಜನೆ ವೇತನ ಪಡೆಯುತ್ತಿದ್ದ 3,471 ಜನ ಅನರ್ಹ ಫಲಾನುಭವಿಗಳು ಎಂಬುದು ತಿಳಿದು ಬಂದಿದೆ.

ಯಲಬುರ್ಗಾ ತಾಲ್ಲೂಕಿನಲ್ಲಿ 1,386 ಜನ ವೃದ್ಧಾಪ್ಯ ವೇತನ, 697 ಜನ ಮಹಿಳೆಯರು ವಿಧವಾ ವೇತನ, 661 ಜನ ಅಂಗವಿಕಲರ ವೇತನ, 1,339 ಜನ ಸಂಧ್ಯಾ ಸುರಕ್ಷಾ ವೇತನ ಪಡೆಯುತ್ತಿದ್ದುದು ಸೇರಿದಂತೆ ಒಟ್ಟು 4,083 ಜನ ಅನರ್ಹ ಫಲಾನುಭವಿಗಳಿದ್ದರು ಎಂಬುದನ್ನು ಕಂದಾಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಅದೇ ರೀತಿ ಕುಷ್ಟಗಿ ತಾಲ್ಲೂಕಿನಲ್ಲಿ ಪತ್ತೆಯಾಗಿರುವ ಒಟ್ಟು 3,121 ಜನ ಅನರ್ಹ ಫಲಾನುಭವಿಗಳ ಪೈಕಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದ 1,203 ಜನ ಅನರ್ಹರನ್ನು, ವಿಧವಾ ವೇತನ- 567, ಅಂಗವಿಕಲರ ವೇತನ- 578 ಹಾಗೂ ಸಂಧ್ಯಾ ಸುರಕ್ಷಾ ವೇತನ ಪಡೆಯುತ್ತಿದ್ದ 773 ಜನರನ್ನು ಪತ್ತೆ ಮಾಡಲಾಗಿದೆ.

ಅಲ್ಲದೇ, ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವ ಕಾರ್ಯ ಸಹ ನಿರಂತರವಾಗಿ ನಡೆಯಲಿದೆ ಎಂದು ಕಂದಾಯ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT