ನವದೆಹಲಿ/ ಭುವನೇಶ್ವರ (ಪಿಟಿಐ): ರಾಷ್ಟ್ರದ ರಾಜಧಾನಿ ಮತ್ತು ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕಿರಾತಕ ಕೃತ್ಯಗಳು ನಡೆದಿವೆ.
ದೆಹಲಿಯಲ್ಲಿ ಮಹಿಳೆ ನೆಲೆಸಿದ್ದ ವೆಲ್ಕಂ ಪ್ರದೇಶದ ಬಾಡಿಗೆ ಮನೆಗೆ ನುಗ್ಗಿದ ಮೂವರು, ಆಕೆಗೆ ಬಲವಂತವಾಗಿ ಮತ್ತೇರಿಸುವ ಪಾನೀಯ ಕುಡಿಸಿ ದುಷ್ಕೃತ್ಯ ಎಸಗಿದರು. ಒಬ್ಬ ಆರೋಪಿ ಗಫಾರ್ (46) ಎಂಬಾತನನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.
ಭುವನೇಶ್ವರದಲ್ಲಿ 19 ವರ್ಷದ ಯುವತಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಹೋಟೆಲ್ಲೊಂದರಲ್ಲಿ ನರ್ತಕಿಯಾಗಿದ್ದ ಯುವತಿ ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದಾಗ, ನರ್ತನ ಕಾರ್ಯಕ್ರಮವೊಂದರ ಕುರಿತು ಮಾತನಾಡುವ ನೆಪದಲ್ಲಿ ಆಕೆಯನ್ನು ಒಂಟಿ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ದುಷ್ಕೃತ್ಯ ಎಸಗಲಾಗಿದೆ. ನಂತರ ಆರೋಪಿಗಳು ಆಕೆಯನ್ನು ಕ್ರೀಡಾಂಗಣವೊಂದರ ಬಳಿ ತಳ್ಳಿ ಹೋಗಿದ್ದರು. ಮತ್ತೊಂದು ಸುದ್ದಿ: ಪುಟ 11