ಸುರಪುರ: ಬ್ಯಾಂಕ್ಗಳು ಸಮರ್ಪಕವಾಗಿ ಮತ್ತು ಲಾಭದಾಯಕವಾಗಿ ನಡೆಯಲು ಸಾಲ ಮರುಪಾವತಿ ಬಹಳ ಮುಖ್ಯ. ಸಾಲ ತೆಗೆದುಕೊಂಡವರು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಮತ್ತೊಬ್ಬರಿಗೆ ಸಾಲ ನೀಡಲು ಸಹಾಯವಾಗುತ್ತದೆ.
ಅಂತಹ ಗ್ರಾಹಕರು ಬ್ಯಾಂಕಿನ ನಂಬಿಕೆ ಉಳಿಸಿಕೊಳ್ಳುತ್ತಾರೆ. ಸಂಘ, ಸಂಸ್ಥೆಗಳು ತಮ್ಮ ಸಾಲ ಮರುಪಾವತಿಯ ಅವಶ್ಯಕತೆಯ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಂಗಂಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎ.ಡಿ.ಬಿ.) ಶಾಖೆಯ ವ್ಯವಸ್ಥಾಪಕ ಶಿವಶರಣಪ್ಪ ನಾಡಿಗೇರ್ ಮನವಿ ಮಾಡಿದರು.
ಭಾರತೀಯ ದಲಿತ ಪ್ಯಾಂಥರ್ ಕಾರ್ಯಕರ್ತರು ಮಂಗಳವಾರ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಲ್ಲೂಕು ಸಂಪೂರ್ಣ ನೀರಾವರಿಗೆ ಒಳಪಟ್ಟಿದ್ದು ರೈತರಿಗೆ ವರದಾನವಾಗಿದೆ. ಆಧುನಿಕ ಕೃಷಿಯನ್ನು ಅನುಸರಿಸಿ ಲಾಭದಾಯಿಕ ಬೆಳೆಗಳನ್ನು ಬೆಳೆಯಬೇಕು. ನಮ್ಮದು ಕೃಷಿ ಅಭಿವೃದ್ಧಿ ಬ್ಯಾಂಕ್ ಆಗಿದ್ದು ಕೃಷಿಗೆ ಉತ್ತೇಜನ ನೀಡುತ್ತಿದೆ. ರೈತರು ಬ್ಯಾಂಕಿನ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಸಾಲವನ್ನು ದುರುಪಯೋಗ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಂಡು ಜೀವನದಲ್ಲಿ ಮುಂದೆ ಬನ್ನಿ ಎಂದು ಕರೆ ನೀಡಿದರು.
ಸನ್ಮಾನಿಸಿದ ದೇವಪುರ ಗ್ರಾಮ ಪಂಚಾಯಿತಿ ಸದಸ್ಯ ಭೀಮಾಶಂಕರ ದೇಸಾಯಿ, ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಗ್ರಾಹಕರೊಡನೆ ಪ್ರೀತಿಯಿಂದ ಮಾತನಾಡಿಸಿದಾಗ ಅವರಲ್ಲಿ ನಂಬಿಕೆ ಗಳಿಸಲು ಸಾಧ್ಯವಾಗುತ್ತದೆ. ಸಾಲ ಮರುಪಾವತಿಯಿಂದ ಸಾಲಗಾರರಿಗೆ ಆಗುವ ಲಾಭದ ಬಗ್ಗೆ ವಿವರಿಸಬೇಕು ಎಂದು ಸಲಹೆ ನೀಡಿದರು.
ಪ್ಯಾಂಥರ್ ತಾಲ್ಲೂಕು ಅಧ್ಯಕ್ಷ ಶೇಖರ ಜೀವಣಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸುರಪುರಕರ್ ಸ್ವಾಗತಿಸಿದರು. ಶ್ರೀಹರಿ ತೇಲ್ಕರ್ ನಿರೂಪಿಸಿದರು. ಆನಂದ ಆಲ್ದಾಳ ವಂದಿಸಿದರು.
ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಕರಡಕಲ್, ಮಾರುತಿ ಆಲ್ದಾಳ, ಶಿವಲಿಂಗಪ್ಪ, ಕೆ. ಎಸ್. ಮಹೇಶಕುಮಾರ್, ಶೇಖರ ಸುರಪುರ ಮತ್ತು ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.