ದಾವಣಗೆರೆ: ಸಾವಯವ ಅಹಾರ ಪದಾರ್ಥಗಳನ್ನು ಬಳಸಿದರೆ ನಾವು ಆರೋಗ್ಯದಿಂದ ಇರಲು ಸಾಧ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರ್ ಹೇಳಿದರು.
ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಜೋಳ ಮತ್ತು ನವಣೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಸಾವಯವದಲ್ಲಿ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಆರ್ಥಿಕತೆಯೂ ವೃದ್ಧಿಸುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಕೆ.ಎಂ. ಶರಣಯ್ಯ ಮಾತನಾಡಿ, ಈ ವರ್ಷ ಮಳೆ ಇಲ್ಲದೆ ಬೆಳೆ ಹಾಳಾಗಿದೆ. ಮಳೆ ಕಡಿಮೆ ಇದ್ದಾಗ ಮೆಕ್ಕೆಜೋಳದ ಬದಲು ರಾಗಿ, ನವಣೆ, ಸಜ್ಜೆ, ಸಾಮೆ ಬೆಳೆಯಬೇಕು ಎಂದರು.
ಬಸವ ಯಾದವಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಕಡಿಮೆ ವಯಸ್ಸಿನಲ್ಲಿಯೇ ಅನೇಕ ಕಾಯಿಲೆ ಬರುತ್ತಿವೆ. ಹಿಂದೆ ಸಗಣಿ, ಕುರಿ ಗೊಬ್ಬರ ಬಳಸಿ ಕೃಷಿ ಮಾಡಲಾಗು ತ್ತಿತ್ತು. ಈಗ, ರಸಗೊಬ್ಬರ ಹಾಕುತ್ತಿದ್ದೇವೆ; ಕ್ರಿಮಿನಾಶಕ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಆಹಾರ ಆರೋಗ್ಯ ವೃದ್ಧಿಸುತ್ತಿಲ್ಲ; ರುಚಿಯನ್ನೂ ನೀಡುತ್ತಿಲ್ಲ ಎಂದು ವಿಷಾದಿಸಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಸ್. ಮುರಿಗೇಂದ್ರಪ್ಪ, ಮಲ್ಲಿಕಾರ್ಜುನ್, ಚಂದ್ರಣ್ಣ, ರಾಜಣ್ಣ ಉಪಸ್ಥಿತರಿದ್ದರು.