ಶಿರಹಟ್ಟಿ: ರೈತರು ಸಂಪ್ರದಾಯ ಕೃಷಿ ಜೊತಗೆ ಹೂಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಪದ್ಧತಿಗೆ ಮುಂದಾಗಬೇಕು ಎಂದು ಶಾಸಕ ರಾಮಣ್ಣ ಲಮಾಣಿ ರೈತರಿಗೆ ಸಲಹೆ ನೀಡಿದರು.
ಪಟ್ಟಣದ ಫಕೀರೇಶ್ವರ ಕಲ್ಯಾಣ ಮಂಟಪದಲ್ಲಿ ಕೃಷಿ ಮಾಹಿತಿ ಅಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಕೃಷಿಗೆ ಭವ್ಯ ಪರಂಪರೆಯಿದೆ. ಇತರ ದೇಶಗಳಿಗೆ ಹೋಲಿ ಸಿದರೆ ದೇಶದ ಕೃಷಿ ಕಾಯಕ ಉತ್ತಮ ಸ್ಥಾನದಲ್ಲಿದೆ.
ರೈತರು ಸಾವಯವ ಪದ್ಧತಿಯನ್ನು ಅಳವಡಿಸಿ ಕೊಂಡಲ್ಲಿ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ರೈತಪರ ಬಜೆಟ್ ರೂಪಿಸಿ ದೇಶಕ್ಕೆ ಮಾದರಿ ಯಾಗಿದ್ದಾರೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಚನ್ನಪ್ಪ ಅಂಗಡಿ ಉಪನ್ಯಾಸ ನೀಡಿದರು. ಮಣ್ಣಿನ ಸತ್ವದ ಪರೀಕ್ಷೆ ಮಾಡಿ ಮಣ್ಣಿಗೆ ಹೊಂದುವ ಬೆಳೆ ಬೆಳೆಯುವ ದಿಸೆಯತ್ತ ಗಮನಹರಿಸಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ಫಲಾನುಭವಿಗಳಾದ ಬಸವರಾಜ ನಾವಿ, ಎಫ್, ಎಲ್ ಲಮಾಣಿ, ಎಂ.ಜಿ. ಉಪ್ಪಾರ, ಎಚ್. ಐ ಪಾಟೀಲ ಅವರಿಗೆ ಪ್ರೋತ್ಸಾಹ ಧನ ಚೆಕ್ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕಮಲವ್ವ ಸಜ್ಜನರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಾ ಬಿದರಳ್ಳಿ, ತಾ.ಪಂ ಸದಸ್ಯ ತಿಮ್ಮರಡ್ಡಿ ಅಳವಂಡಿ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಹಂಜಿ, ಎಸ್. ಕೆ ಬುರಡಿ, ಅಕ್ಬರ್ ಯಾದಗಿರಿ, ವೀರೇಂದ್ರ ಪಾಟೀಲ, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಕೃಷಿ ಅಧಿಕಾರಿ ಎಂ. ಕೆ. ಹಿರೇಮಠ ಸ್ವಾಗತಿಸಿದರು. ಕೆ. ಎ. ಬಳಿಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮ ಅಂಗವಾಗಿ ವಸ್ತು ಪ್ರದರ್ಶನ ಮಳಿಗೆ ಏರ್ಪಡಿಸಲಾಗಿತ್ತು. ಹಲವು ಬಗೆಯ ತರಕಾರಿ ವಸ್ತುಗಳಿಂದ ಮಾಡಿದ ವೆಂಕಟೇಶ್ವರ ಮೂರ್ತಿ ನೋಡುಗರನ್ನು ಆಕರ್ಷಿಸಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ಡಾ. ದ. ರಾ ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಗಂಗೂಬಾಯಿ ಹಾನಗಲ್, ಪುಟ್ಟರಾಜ ಗವಾಯಿ ಅವರ ಚಿತ್ರಗಳನ್ನು ಹಲವು ಬಗೆಯ ಹಣ್ಣುಗಳಲ್ಲಿ ಬಿಡಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.