ಸೋಮವಾರಪೇಟೆ: ರೈತರು ಸಾವಯವ ಕೃಷಿಯನ್ನು ಅವಲಂಬಿಸುವ ಮೂಲಕ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಹಾಸನ ಆಕಾಶವಾಣಿ ನಿಲಯದ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ ಅಂಗಡಿ ಗುರುವಾರ ಹೇಳಿದರು.
ಸಮೀಪದ ಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಹಿರಿಕರ ಮಲ್ಲೇಶ್ವರ ಸಾವಯವ ಕೃಷಿಕರ ಸಂಘದ ಆಶ್ರಯದಲ್ಲಿ ನಡೆದ ಸಾವಯವ ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾವಯವ ಕೃಷಿಯಿಂದ ರೈತರು ಆದಾಯದೊಂದಿಗೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಕೃಷಿಕರು ರಾಸಾಯನಿಕ ಗೊಬ್ಬರವನ್ನು ಅತಿಯಾಗಿ ಬಳಸುತ್ತಿರುವ ಕಾರಣದಿಂದ ಭೂಮಿಯ ಫಲವತ್ತತೆ ಕ್ಷೀಣಿಸುತ್ತಿದೆ.
ಈ ನಿಟ್ಟಿನಲ್ಲಿ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ ಅಧಿಕ ಇಳುವರಿಯನ್ನು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಶ್ವೇಶ್ವರಿ ಬಾಗಿ, ಸೋಮವಾರಪೇಟೆ ಕೃಷಿ ಇಲಾಖೆಯ ಅಧಿಕಾರಿ ಡಾ.ಮುಕುಂದ, ಮೈತ್ರಿ ಸಂಸ್ಥೆಯ ಚಿಕ್ಕೇಗೌಡ, ಮಲ್ಲೇಶ್ವರ ಸಾವಯವ ಕೃಷಿಕ ಸಂಘದ ಅಧ್ಯಕ್ಷ ಎಚ್.ಡಿ.ಚಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.