ಯಲ್ಲಾಪುರ: ಸಹಜವಾಗಿ ಪ್ರಕೃತಿ ಕೊಟ್ಟ ಕೊಡುಗೆಯನ್ನು ಉಳಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ. ಸಾವಯವದ ಮೂಲಕ ಭೂಮಿಯ ಸತ್ವವನ್ನು ಹೆಚ್ಚಿಸಿ ಉತ್ತಮ ಗುಣಮಟ್ಟದ ಫಸಲನ್ನು ಪಡೆದರೆ ಆರೋಗ್ಯಪೂರ್ಣ ವಾತಾವರಣ ನಿರ್ಮಿಸಲು ಸಾಧ್ಯ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಸಂಶೋಧನಾ ನಿರ್ದೇಶಕ ಡಾ. ಬಿ.ಎನ್. ಪಾಟೀಲ ಹೇಳಿದರು.
ಧಾರವಾಡದ ಸಾವಯವ ಕೃಷಿ ಸಂಸ್ಥೆ, ಗ್ರಾಮೀಣ ಗೃಹ ವಿಜ್ಞಾನ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರ ಮತ್ತು ಕೀಟನಾಶಕ ಉತ್ಪಾದನೆ, ಸಣ್ಣ ಉದ್ದಿಮೆಗಳ ಮೂಲಕ ಮಹಿಳಾ ಸಶಕ್ತೀಕರಣ ಕುರಿತು ಜಡ್ಡಿಯಲ್ಲಿ ನಡೆದ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ಹಿರಿಯ ವಿಜ್ಞಾನಿ ಡಾ. ಜ್ಯೋತಿ ವಸ್ತ್ರದ, ಕೃಷಿ ವಿವಿ ಸಂಶೋಧನಾ ನಿರ್ದೇಶನಾಲಯದ ಸಹಪ್ರಾಧ್ಯಾಪಕ ಯು.ಕೆ. ಹುಲಿಹಳ್ಳಿ, ಹಿರಿಯ ಕೃಷಿಕ ಗಜಾನನ ಭಟ್ ಜಡ್ಡಿ, ಸಮನ್ವಯನಾಧಿಕಾರಿ ಪ್ರಭಾವತಿ ಉಪಸ್ಥಿತರಿದ್ದರು. ಯೋಜನಾ ಮುಖ್ಯಸ್ಥೆ ಡಾ. ಸುಮಾ ಹಾಲಸ್ಕರ್ ಅಧ್ಯಕ್ಷತೆ ವಹಿಸಿದ್ದರು.
ಗೋದಾವರಿ ಭಟ್ಟ, ರತ್ನಾ ಬಸನಗೌಡರ್, ಪ್ರಭಾವತಿ ಜೈರಾಜ್ ತರಬೇತಿಯ ಅನುಭವ ಹಂಚಿಕೊಂಡರು. ದೀಪಾ ಸ್ವಾಗತಿಸಿದರು. ಪವಿತ್ರಾ ಪಟಗಾರ್ ಕಾರ್ಯಕ್ರಮ ನಿರೂಸಿದರು. ಕೃಷಿ ಅಧಿಕಾರಿ ಬಸನಗೌಡರ್ ವಂದಿಸಿದರು.