ಹಾವೇರಿ: ಚಲನಚಿತ್ರಗಳ ಮಾದರಿಯಲ್ಲಿ ಸಾಹಿತ್ಯ ಕೃತಿಗಳನ್ನು ಬಿಡುಗಡೆಗೆ ಮುನ್ನ ಪರಿಶೀಲಿಸಲು ಸೆನ್ಸಾರ್ ಮಂಡಳಿ ರಚಿಸುವುದು ಸೂಕ್ತವಲ್ಲ. ಹಾಗೊಂದು ವೇಳೆ ರಚಿಸಲು ಸರ್ಕಾರ ಮುಂದಾದರೆ, ತಾವು ತೀವ್ರವಾಗಿ ವಿರೋಧಿಸುವುದಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದರು.
ಜಿಲ್ಲೆಯ ಶಿಗ್ಗಾವಿ ತಾಲ್ಲೂಕು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸೋಮವಾರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಐಎಎಸ್ಗಳ ನಿರಾಸಕ್ತಿ: ‘ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳು ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿರುವುದರಿಂದಲೇ ‘ಕನ್ನಡ ಯೂನಿಕೋಡ್ ತಂತ್ರಾಂಶ‘ವನ್ನು ಈವರೆಗೆ ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ’ ಎಂದು ಸರ್ಕಾರದಲ್ಲಿರುವ ಸಚಿವರುಗಳಿಗೆ ಈ ಬಗ್ಗೆ ಯಾವುದೇ ಜ್ಞಾನ ಇಲ್ಲ. ಅದನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಂಡು ತಂತ್ರಾಂಶ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ’ ಎಂದು ದೂರಿದರು.
‘ತಮಿಳುನಾಡಿನಲ್ಲಿ ಆ ಭಾಷೆಯ ಅಭಿವೃದ್ಧಿಗಾಗಿ ವಿಶ್ವ ತಮಿಳು ಸಮ್ಮೇಳನ ನಡೆಸಿ ವಿಷಯ ತಜ್ಞರಿಂದ ನೂರಕ್ಕೂ ಹೆಚ್ಚು ಪ್ರಬಂಧ ಮಾಡಿಸಲಾಯಿತು. ಅವುಗಳ ಅನುಷ್ಠಾನಕ್ಕಾಗಿ ರಾಜ್ಯದ 10 ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಯಿತು. ಆದರೆ, ರಾಜ್ಯದಲ್ಲಿ ಕನ್ನಡ ಉಳಿಸುವುದಕ್ಕಾಗಿ ಇಂಥದೊಂದು ತಂತ್ರಾಂಶ ಅಗತ್ಯವಿದೆ ಎಂಬುದರ ಬಗ್ಗೆ ಸರ್ಕಾರ ನಡೆಸುವ ಜನಪ್ರತಿನಿಧಿಗಳಿಗೆ ಅರಿವು ಇಲ್ಲದಿರುವುದು ಬೇಸರದ ಸಂಗತಿ’ ಎಂದು ಹೇಳಿದರು.
‘ಇದಕ್ಕೆ ರಾಜಕೀಯ ವ್ಯಕ್ತಿಗಳಷ್ಟೇ ಕಾರಣರಲ್ಲ. ಬೇರೆ ಬೇರೆ ಖಾಸಗಿ ಕಂಪೆನಿಗಳ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಕನ್ನಡ ಭಾಷಿಕರೇ ಆದ ಹಿರಿಯ ಐಎಎಸ್ ಅಧಿಕಾರಿಗಳೂ ಕಾರಣರಾಗಿದ್ದಾರೆ’ ಎಂದು ದೂರಿದರು. ‘ಕನ್ನಡ ಭಾಷೆ ಉಳಿಕೆಗೆ ಆವಿಷ್ಕಾರ, ಯಂತ್ರಜ್ಞಾನ, ತಂತ್ರಜ್ಞಾನಗಳನ್ನು ಕನ್ನಡದಲ್ಲಿ ಅಳವಡಿಸಬೇಕು. ಆದರೆ, ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವವರಿಗೆ ಈ ತಂತ್ರಾಂಶಗಳ ಬಗ್ಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅವರನ್ನು ಕತ್ತಲಲ್ಲಿ ಇಡುತ್ತಿದ್ದಾರೆ’ ಎಂದು ದೂರಿದರು.
ತರಗತಿ ಮೀಸಲಿಡಿ: ‘ಗಮಕ, ತಾಳಮದ್ದಲೆ, ಕೀರ್ತನೆಯಂಥ ಅನೇಕ ಜನಪದ ಕಥನ ಮಾದರಿಗಳನ್ನು ಪೂರ್ವಪ್ರಾಥಮಿಕದಿಂದ ಎಸ್ಸೆಸ್ಸೆಲ್ಸಿವರೆಗೆ ಓದಿಸಲು ವಾರದಲ್ಲಿ ಒಂದು ತರಗತಿ ಮೀಸಲಿಡಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.