ಧಾರವಾಡ: ಕನ್ನಡ ಸಾರಸ್ವತ ಲೋಕದಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಮರೆಯಲಾಗದ ಮೈಲುಗಲ್ಲು~ ಎಂದು ಪ್ರೊ.ನಾ.ಗೀತಾಚಾರ್ಯ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಬುಧವಾರ ಏರ್ಪಡಿಸಿದ್ದ `ಪ್ರೊ.ಜಿ.ವಿ. ಮತ್ತು ಕನ್ನಡ ನಿಘಂಟು ಚರಿತ್ರೆ~ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, `ಜಿ.ವಿ. ಅವರು ಸಾಮಾಜಿಕ ನಿಘಂಟು ಪರಿಕಲ್ಪನೆಯನ್ನು ರೂಪಿಸಿದರು. ಸಾಹಿತಿ, ಸಂಶೋಧಕ, ವಿಮರ್ಶಕರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ.
`ಇಗೋ ಕನ್ನಡ~ ಎಂಬ ಸರಳ ಹಾಗೂ ಜನಸಾಮಾನ್ಯರಿಗೆ ಅರ್ಥವಾಗುವ ಅಂಕಣವನ್ನು ರಚಿಸಿ, ನಿಘಂಟು ಬ್ರಹ್ಮ ಎಂಬ ಖ್ಯಾತಿಯನ್ನು ಪಡೆದರು~ ಎಂದರು. `ವಿವಿಗಳಲ್ಲಿ ನಿಘಂಟು ಶಾಸ್ತ್ರದ ಬಗ್ಗೆ ಹಲವಾರು ಸಂಶೋಧನೆಗಳು ನಡೆಯಬೇಕು~ ಎಂದು ಕವಿವಿ ಸಿಂಡಿಕೇಟ್ ಸದಸ್ಯ ಪ್ರೊ.ಎಸ್.ಎಸ್.ಭದ್ರಾಪುರ ಹೇಳಿದರು.
`ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಶಬ್ದಗಳ ಸೊಗಡನ್ನು ತಿಳಿಯಬೇಕು~ ಎಂದು ಹಿರಿಯ ಪ್ರಾಧ್ಯಾಪಕ ಡಾ.ಶಾಂತಿನಾಥ ದಿಬ್ಬದ ಸಲಹೆ ನೀಡಿದರು.