ಬೀದರ್: ಸಿ.ಇ.ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಶಾಹೀನ್ ಕಾಲೇಜು ವಿದ್ಯಾರ್ಥಿಗಳನ್ನು ನಗರದ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.ಸಿ.ಇ.ಟಿ. ಪರೀಕ್ಷೆಯಲ್ಲಿ ಈ ಬಾರಿ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿರುವುದು ಸಂತಸದ ಸಂಗತಿ ಎಂದು ಉದ್ಘಾಟನೆ ನೆರವೇರಿಸಿದ ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಹೇಳಿದರು.
ಸಿ.ಇ.ಟಿ. ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಮತ್ತು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿ ಮುಷ್ತಾಕ್ ಅಹಮ್ಮದ್ ಸಿ.ಇ.ಟಿ. ವೈದ್ಯಕೀಯ ವಿಭಾಗದಲ್ಲಿ 87ನೇ ರ್ಯಾಂಕ್ ಗಳಿಸಿರುವುದು ಶೈಕ್ಷಣಿಕವಾಗಿ ಬೀದರ್ ಜಿಲ್ಲೆ ಇತರ ಜಿಲ್ಲೆಗಳಿಗಿಂತ ಹಿಂದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಕಾರಣಕ್ಕೆ ಬಡತನ ಅಡ್ಡಿಯಾಗುವುದಿಲ್ಲ. ಆದರೆ, ಓದುವ ಛಲ ಇರಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಶಫಿಕ್ ಮಾತನಾಡಿದರು. ಶಾಹೀನ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ನುಸ್ರತ್ ಹುಸೇನ್ ಉಪಸ್ಥಿತರಿದ್ದರು.ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸಿ.ಇ.ಟಿ.ಯಲ್ಲಿ ಸಾಧನೆ ಮಾಡಿರುವ ಮುಷ್ತಾಕ್ ಅಹಮ್ಮದ್(87ನೇ ರ್ಯಾಂಕ್), ಪೂಜಾ ಪಾಟೀಲ್ (364 ರ್ಯಾಂಕ್), ನಾಗರಾಜ (389ನೇ ರ್ಯಾಂಕ್), ಮಹಮ್ಮದ್ ಅಬ್ದುಲ್ ಸಲೀಮ್ (441ನೇ ರ್ಯಾಂಕ್), ಭರತ ಕುಮಾರ (568ನೇ ರ್ಯಾಂಕ್), ಪ್ರಿಯಂಕಾ (758ನೇ ರ್ಯಾಂಕ್), ಅಜ್ರಾ ಸಹವಾರ (779ನೇ ರ್ಯಾಂಕ್), ಲುಬ್ನಾ ಫಾತೀಮಾ (996ನೇ ರ್ಯಾಂಕ್) ಮತ್ತಿತರ ವಿದ್ಯಾರ್ಥಿಗಳು ಮತ್ತು ಅವರ ಪಾಲಕರನ್ನು ಸತ್ಕರಿಸಲಾಯಿತು.
ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕನಸು ಕಂಡಿದ್ದ ಅನೇಕ ವಿದ್ಯಾರ್ಥಿಗಳು ಅದು ಸಾಕಾರ ಆಗಿದ್ದರಿಂದ ಭಾವಾವೇಷಕ್ಕೆ ಒಳಗಾದರು. ಅನುಭವ ಹಂಚಿಕೊಳ್ಳುವಾಗವೇದಿಕೆಯಲ್ಲೇ ಆನಂದ ಭಾಷ್ಪ ಸುರಿಸಿದರು. ಪಾಲಕರು ಸಹ ಮಾತನಾಡಿ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಆತೀಫ್ ಹುಸೇನ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.