ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಸಿ ವರದಿ: ಪರಿಸರವಾದಿಗಳ ಗಡಿಪಾರಿಗೆ ಒತ್ತಾಯ

Last Updated 7 ಮೇ 2012, 6:15 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಜ್ಲ್ಲಿಲೆಗೆ ಮಾರಕವಾಗಿರುವ ಡೋಂಗಿ ಪರಿಸರವಾದಿಗಳನ್ನು ಹೊರದೂಡದಿದ್ದರೆ ಮುಂದಿನ  ಪೀಳಿಗೆಗೆ ಕೃಷಿ ಮಾಡಲು ಒಂದು ಅಂಗೈ ಅಗಲ ಭೂಮಿ ಸಿಗುವುದಿಲ್ಲ ಎಂದು ಹಿರಿಯ ವಿಚಾರವಾದಿ ಎ.ಕೆ.ಸುಬ್ಬಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದ ಸಾರ್ವಜನಿಕ ವೇದಿಕೆಯಲ್ಲಿ ಕೊಡಗು ಜನಪರ ವೇದಿಕೆ ಭಾನುವಾರ ಆಯೋಜಿಸಿದ್ದ ಸಿಇಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿ ವಿರೋಧಿಸಿ ಮಾತನಾಡಿದ ಅವರು, ಡೋಂಗಿ ಪರಿಸರವಾದಿಗಳ ಚಿತಾವಣೆಯಿಂದ ಜಿಲ್ಲೆಯ ಕೃಷಿ ಭೂಮಿ ಅರಣ್ಯವಾಗಲಿದೆ. ಸಿಇಸಿಗೆ ಮಾಹಿತಿ ನೀಡಿರುವವರು ಪರಿಸವಾದಿಗಳು. ಇದರ ವಿರುದ್ಧ ಹೋರಾಟ ನಡೆಸದಿದ್ದರೆ ಮುಂದೆ ಜಿಲ್ಲೆಯ ಜನತೆ ಗುಳೆ ಹೋಗಬಾಕಾದೀತು ಎಂದು ಎಚ್ಚರಿಸಿದರು.

ಪರಿಸರವಾದಿ ಎಂದು ಹೇಳಿಕೊಳ್ಳುವ ಉಲ್ಲಾಸ್ ಕಾರಾಂತ್ ಸೇವ್‌ಟ್ರೈಗರ್ ಸಂಸ್ಥೆ  ಸ್ಥಾಪಿಸಿ ಹುಲಿ ರಕ್ಷಣೆ  ಮಾಡುವ ಉದ್ದೇಶ ಹೊತ್ತು ಅರಣ್ಯ ಪ್ರವೇಶಿಸಿ ಬಹಳಷ್ಟು ಲಾಭ ಪಡೆದುಕೊಂಡರು. ಇವರಿಗೆ ಬೆಂಬಲವಾಗಿ ನಿಂತಿರುವವರಿಗೆ ಕಡಿವಾಣ ಹಾಕಬೇಕಾಗಿದೆ. ಅರಣ್ಯದಲ್ಲಿ ಗಾಂಜಾಬೆಳೆಯುವ ಪರಿಸರವಾದಿಗಳು ಪ್ರಾಣಿಗಳ ಆಹಾರ ಕಿತ್ತುಕೊಳ್ಳುತ್ತಿದ್ದಾರೆ. ತಮ್ಮ ಲಾಭಕ್ಕಾಗಿ ಬೀಟೆ ಮರ ಬೆಳೆಸಿ ಆನೆಗಳ ಆಹಾರವನ್ನು ಹಾಳು ಮಾಡಿದ್ದಾರೆ. ಇದರಿಂದ ಕಾಡಾನೆಗಳು ಊರಿಗೆ ದಾಳಿ ಇಡುತ್ತಿವೆ ಎಂದು ದೂರಿದರು.

ಅಸ್ಸಾಂನಲ್ಲಿ ಇಲ್ಲಿಗಿಂತ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಕಾಡು ಕೂಡ ಕಿರಿದಾಗಿದೆ. ಆದರೆ ಒಂದೇ ಒಂದು ಆನೆ ಊರಿಗೆ ದಾಳಿ ಇಟ್ಟ ಉದಾಹರಣೆ ಇಲ್ಲ. ಅಲ್ಲಿ ಅರಣ್ಯದಲ್ಲಿ  ಕಾಡು ಪ್ರಾಣಿಗಳಿಗೆ ಬೇಕಾದ ಗಿಡಮರ ಬೆಳೆಸಿದ್ದಾರೆ ಎಂದು ಹೇಳಿದರು.

ಜನತೆಗೆ ಉಪಯೋಗವಾಗಲಿ ಎಂದು ಕಡಮಕಲ್ಲು ಅರಣ್ಯದಲ್ಲಿ ರಸ್ತೆ ನಿರ್ಮಿಸಿದ್ದ ಬಗ್ಗೆ ಪರಿಸರವಾದಿಗಳು ಮೊಕದ್ದಮೆ ಹೂಡಿದ್ದಾರೆ. ಇದು ಮಾನವ ಹಕ್ಕು ಉಲ್ಲಂಘನೆ ಅಲ್ಲವೆ ಎಂದು ಪ್ರಶ್ನಿಸಿದ ಅವರು ಅರಣ್ಯೀಕರಣದ  ವಿರುದ್ಧ ಅಗತ್ಯ ಕಾನೂನು ರೂಪಿಸಿ ಮುಂದಿನ ಪೀಳಿಗೆಗೆ ಜಿಲ್ಲೆಯ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಮುಂದೆ ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ ಪರಿಸರ ವಾದಿಗಳ ವಿರುದ್ಧ ನಿರ್ಣಯ ಕೈಗೊಂಡು ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಕರೆನೀಡಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ ಅರಣ್ಯಾಧಿಕಾರಿಗಳು ಹಾಗೂ ಪರಿಸರವಾದಿಗಳು ಸೇರಿ ಇ್ಲ್ಲಲಿಯ ಮೂಲ ನಿವಾಸಿಗಳನ್ನು ಹೊರದಬ್ಬುವ  ಸಂಚು  ರೂಪಿಸಿದ್ದಾರೆ. ಪರಿಸರವಾದಿಗಳು ತೆರೆಮರೆಯ ಸಂಚು ನಡೆಸುವುದನ್ನು ಬಿಟ್ಟು ಧೈರ್ಯವಾಗಿ ಹೊರಬಂದು  ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು. ಪರಿಸರ ವಾದಿಗಳನ್ನು  ಜಿಲ್ಲೆಯಿಂದ ಗಡಿಪಾರು ಮಾಡದಿದ್ದರೆ  ಜನತೆಗೆ ನೆಮ್ಮದಿ  ಇಲ್ಲದಂತಾಗುತ್ತದೆ ಎಂದು ಹೇಳಿದರು.

ಎಕರೆ ಪ್ರದೇಶದಲ್ಲಿ 25 ಮರಗಳಿದ್ದರೆ ಅದನ್ನು ಡೀಮ್ಡಫಾರೆಸ್ಟ್ ಎಂದು ಕರೆಯಲಾಗುತ್ತದೆ. ಹಾಗಾದರೆ ವಿಧಾನಸೌಧದ ಎದುರು ನೂರಕ್ಕೂ ಹೆಚ್ಚು ಮರಗಳಿವೆ. ಅದನ್ನು ಡೀಮ್ಡಫಾರೆಸ್ಟ್ ಎಂದು ಘೋಷಿಸಲಿ. ಜನತೆಗೆ ತೊಂದರೆ ಉಂಟಾದರೆ ಒಂದು ಕ್ಷಣವೂ ಶಾಸಕ ಸ್ಥಾನದಲ್ಲಿ ಇರುವುದಿಲ್ಲ ಎಂದು ಘೋಷಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್‌ಮಾಚಯ್ಯ ಮಾತನಾಡಿ, ಡೊಂಗಿ ಪರಿಸರವಾದಿಗಳು ತಮ್ಮ ಸಾಮ್ರಾಜ್ಯ ವಿಸ್ತಾರ ಮಾಡಿಕೊಳ್ಳುತ್ತಿರುವುದರಿಂದ ಜಮ್ಮ ಹಿಡುವಳಿದಾರರಿಗೆ ನಮ್ಮದಿ ಇಲ್ಲದಂತಾಗಿದೆ. ಇದರ ವಿರುದ್ಧ ಅರ್ಹನಿಶಿ ಹೋರಾಟ ಅಗತ್ಯ ಎಂದು ಹೇಳಿದರು.

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ರವಿಕುಶಾಲಪ್ಪ, ಉಪಾಧ್ಯಕ್ಷೆ ಕಾವೇರಿ, ಸದಸ್ಯರಾದ ಬಾಂಡ್ ಗಣಪತಿ, ಎಂ.ಎಸ್.ಕುಶಾಲಪ್ಪ, ಶರೀನ್ ಸುಬ್ಬಯ್ಯ, ಮುಖಂಡರಾದ ಬೋಪಣ್ಣ, ಶಿವುಮಾದಪ್ಪ, ವಿ.ಪಿ.ಶಶಿಧರ್, ವಿಜಯ, ಮನು ಮುತ್ತಪ್ಪ, ಬೊಟ್ಟಂಗಡ ರಾಜು, ಎಂ.ಬಿ.ದೇವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಹಾಜರಿದ್ದರು. ಸರಾ ಚಂಗಪ್ಪ ಸ್ವಾಗತಿಸಿದರು. ಚೇರಂಡ ನಂದಾ ಸುಬ್ಬಯ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT