ಛತ್ತೀಸಘಡ (ಪಿಟಿಐ): ಗುಡಗಾಂವ್ ಸಿಟಿ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ರೂ 300 ಕೋಟಿ ಮೊತ್ತದ ಬ್ಯಾಂಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ಬ್ಯಾಂಕುಗಳಿಗೆ ಸೂಚನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
‘ದೇಶದ ಯಾವುದೇ ಬ್ಯಾಂಕಿನ, ಯಾವುದೇ ಶಾಖೆಯಲ್ಲಿ ಹಗರಣ ನಡೆದರೂ ಅದನ್ನು ‘ಆರ್ಬಿಐ’ ಗಂಭೀರವಾಗಿ ಪರಿಗಣಿಸುತ್ತದೆ. ಹಾಗೂ ಇದಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಆರ್ಬಿಐನ ಪ್ರಧಾನ ವ್ಯವಸ್ಥಾಪಕ ಜಿ. ಗೋಪಾಲಕೃಷ್ಣ ತಿಳಿಸಿದ್ದಾರೆ. ‘ಸಿಟಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಆರ್ಬಿಐ ಗವರ್ನರ್ ಇಲ್ಲವೇ ಸಹಾಯಕ ಗವರ್ನರ್ ಶೀಘ್ರದಲ್ಲಿಯೇ ಬ್ಯಾಂಕುಗಳಿಗೆ ಸೂಚನೆ ಹೊರಡಿಸಲಿದ್ದಾರೆ. ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನಗ್ನು ’ಆರ್ಬಿಐ’ ಪರಿಶೀಲಿಸಲಿದೆ’ ಎಂದು ಗೋಪಾಲ ಕೃಷ್ಣ ಮಾಧ್ಯಮಗಳಿಗೆ ತಿಳಿಸಿದರು.
ಈ ಹಗರಣಕ್ಕೆ ಸಂಬಂಧಿಸಿದಂತೆ ಗುಡಗಾಂವ್ ಶಾಖೆಯ ಸಂಪರ್ಕ ವ್ಯವಸ್ಥಾಪಕ ಶಿವರಾಜ್ ಪುರಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.