ಬೆಂಗಳೂರು: ಎಟಿಎಂ ಘಟಕಗಳಿಗೆ ಭದ್ರತೆ ಒದಗಿಸುವಂತೆ ಆಯಾ ಬ್ಯಾಂಕ್ಗಳ ಅಧಿಕಾರಿಗಳಿಗೆ ನಗರ ಪೊಲೀಸರು ನೀಡಿದ್ದ 45 ದಿನಗಳ ಗಡುವು ಶನಿವಾರ ಅಂತ್ಯಗೊಂಡಿದ್ದು, ನಿಯಮ ಪಾಲಿಸದ ಎಟಿಎಂ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಭಾನುವಾರ ಬೆಳಿಗ್ಗೆಯಿಂದಲೇ ಕಾರ್ಯಚರಣೆ ಆರಂಭಿಸಲಿದ್ದಾರೆ.
ಎನ್.ಆರ್.ಚೌಕದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಘಟಕದಲ್ಲಿ ನ.19ರಂದು ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆ ನಂತರ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಆಯಾ ಬ್ಯಾಂಕ್ಗಳು ನ.24ರ ಸಂಜೆ 4 ಗಂಟೆಯೊಳಗೆ ಎಟಿಎಂ ಘಟಕದ ಬಳಿ 24 ಗಂಟೆ ಲಭ್ಯವಿರುವಂತೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸ ಬೇಕು ಎಂದು ಆದೇಶ ಹೊರಡಿಸಿತ್ತು.
‘ಶನಿವಾರ ರಾತ್ರಿ 12 ಗಂಟೆಗೆ ಗಡುವು ಮುಗಿಯಲಿದ್ದು, ಭಾನುವಾರ ಬೆಳಿಗ್ಗೆ ನಗರಾದಾದ್ಯಂತ ಸಮೀಕ್ಷೆ ನಡೆಸಿ ಎಟಿಎಂ ಘಟಕಗಳಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಮಾಹಿತಿ ಕಲೆ ಹಾಕಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್ ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.