ಬಸವಾಪಟ್ಟಣ: ಸುವರ್ಣಭೂಮಿ ಯೋಜನೆ ಅಡಿ ನೀಡುವ ಹಣದ ವಿತರಣೆಯಲ್ಲಿ ಅನ್ಯಾಯ ಆಗಿದೆ ಎಂದು ತಾಲ್ಲೂಕು ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಬುಧವಾರ ಇಲ್ಲಿನ ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಎನ್. ಬಸವರಾಜ ಮಾತನಾಡಿ, 250 ಫಲಾನುಭವಿಗಳ ಪೈಕಿ 105 ಜನ ರೈತರಿಗೆ ಮಾತ್ರ ಹಣ ಬಿಡುಗಡೆ ಆಗಿದೆ. ಉಳಿದ ರೈತರನ್ನು ಕಡೆಗಣಿಸಿದ್ದಾರೆ. ಕೂಡಲೇ ಉಳಿದ ರೈತರಿಗೂ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನೂ ಉಗ್ರಗೊಳಿಸಲಾಗುವುದು ಎಂದರು.
ರೈತ ಸಂಪರ್ಕ ಕೇಂದ್ರದ ಅಧಿಕಾರಿ ಯು.ಸಿ. ಉಮೇಶ್ `ಪ್ರಜಾವಾಣಿ~ ಜತೆ ಮಾತನಾಡಿ, ಈ ವರ್ಷ ಸುವರ್ಣಭೂಮಿ ಯೋಜನೆಗೆ ನಮ್ಮ ಕೇಂದ್ರದ ವ್ಯಾಪ್ತಿಯ ಹಳ್ಳಿಗಳಿಂದ 250 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಸರ್ಕಾರದ ನಿಯಮದಂತೆ ಹತ್ತಿ, ಎಣ್ಣೆಬೀಜ ಮತ್ತು ದ್ವಿದಳ ಧಾನ್ಯ ಬೆಳೆಗಾರರಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ.
ಉಳಿದವರು ಮೆಕ್ಕೆಜೋಳ ಬೆಳೆದ ರೈತರಾಗಿದ್ದಾರೆ. ನಿಯಮದಂತೆ ಅವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಒಂದು ವೇಳೆ ಇಲಾಖೆ ಮೆಕ್ಕೆಜೋಳ ಬೆಳೆದವರಿಗೂ ಹಣ ನೀಡಬಹುದೆಂದು ಅವರಿಗೂ ಹಣ ಬಿಡುಗಡೆ ಮಾಡಿದರೆ ಅವರನ್ನೂ ಫಲಾನುಭವಿಗಳೆಂದು ಪರಿಗಣಿಸಿ ಹಣ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಜಿ. ನಾಗರಾಜ ಸಂಘದ ಪದಾಧಿಕಾರಿಗಳಾದ ಎಸ್.ಎನ್. ಸಂತೋಷ್, ಕರಿಬಸಪ್ಪ, ನಲ್ಲೂರು ಹನುಮಂತಪ್ಪ, ಕತ್ತಲಗೆರೆ ಮಂಜಪ್ಪ, ರವಿಕುಮಾರ್, ರಂಗಪ್ಪ ಮುಂತಾದವರು ಭಾಗವಹಿಸಿದ್ದರು.